
ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯ ನಾಲ್ಕನೇ ಬಾರಿಗೆ ಕೋಡಿ ಬೀಳುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಆದರೆ ಕೋಡಿ ಭಾಗದಲ್ಲಿ ಸೇತುವೆ ನಿರ್ಮಿಸದ ಕಾರಣಕ್ಕೆ ಹಿರಿಯೂರು– ಹೊಸದುರ್ಗ ನಡುವಿನ ಸಂಚಾರಕ್ಕೆ ಸಂಚಕಾರ ಬಂದಿದ್ದು, ಬಸ್ ಮಾಲೀಕರು, ಪ್ರಯಾಣಿಕರು ಗೋಳಾಡುವಂತಾಗಿದೆ.
ವಾಣಿವಿಲಾಸ ಅಣೆಕಟ್ಟೆ ಕೋಡಿ ಬಿದ್ದಾಗ ಹಿರಿಯೂರು– ಹೊಸದುರ್ಗ ಸಂಪರ್ಕಿಸುವ ರಸ್ತೆಯ ಮೇಲೆಯೇ ಕೋಡಿಯ ನೀರು ಹರಿಯಬೇಕು. 2022 ಸೆ. 2ರಂದು ವಾಣಿವಿಲಾಸ ಜಲಾಶಯ ಎರಡನೇ ಬಾರಿಗೆ ಕೋಡಿ ಬಿದ್ದ ಸಂದರ್ಭದಲ್ಲಿ ಹೊಸದುರ್ಗ– ಹಿರಿಯೂರು ನಗರಗಳನ್ನು ಸಂಪರ್ಕಿಸುವ ರಸ್ತೆ ಕೋಡಿಯ ನೀರಿನಲ್ಲಿ ಕೊಚ್ಚಿ ಹೋಗಿತ್ತು.
ಹೀಗಾಗಿ ಹೊಸದುರ್ಗದಿಂದ ಬರುವ ಬಸ್ಗಳು ಮಾಡದಕೆರೆ, ಲಕ್ಕಿಹಳ್ಳಿ, ಕುಂಟಪ್ಪನಹಟ್ಟಿ, ತಳವಾರಹಟ್ಟಿ, ಕಕ್ಕಯ್ಯನಹಟ್ಟಿ ಮೂಲಕ ವಾಣಿವಿಲಾಸಪುರಕ್ಕೆ ಬರಬೇಕಿತ್ತು. ವಾಣಿವಿಲಾಸಪುರದಿಂದ ಹೊಸದುರ್ಗದ ಕಡೆಗೆ ಚಲಿಸುವ ಬಸ್ಗಳಿಗೂ ಈ ಮಾರ್ಗ ಅನಿವಾರ್ಯ ಆಯ್ಕೆ ಆಗಿತ್ತು.
‘ವಾಣಿವಿಲಾಸಪುರದಿಂದ ಕಕ್ಕಯ್ಯನಹಟ್ಟಿ ಮೂಲಕ ಹಿರಿಯೂರು– ಹೊಸದುರ್ಗ ಬೈಪಾಸ್ಗೆ ಹೋಗುವ ರಸ್ತೆ ಅತ್ಯಂತ ಕಿರಿದಾಗಿದ್ದು, ದೊಡ್ಡ ಗಾತ್ರದ ಒಂದು ವಾಹನ ಹೋಗುವಷ್ಟು ಮಾತ್ರ ಅಗಲವಿದೆ. ಅಕಸ್ಮಾತ್ ಎರಡು ಬಸ್ಗಳು ಎದುರಾದರೆ, ಹಿಂದಕ್ಕೂ ಹೋಗುವಂತಿಲ್ಲ, ಮುಂದಕ್ಕೂ ಹೋಗುವಂತಿಲ್ಲ. ರಸ್ತೆಯ ಎರಡೂ ಬದಿಯ ಮುಳ್ಳುಕಂಟಿಗಳ ನಡುವೆ ಬಂಧಿಯಾಗುತ್ತವೆ. ಈ ಸಮಸ್ಯೆ 2022ರಲ್ಲಿ ಜಲಾಶಯ ಕೋಡಿ ಬಿದ್ದಾಗಿನಿಂದ ಇದ್ದರೂ ಪರಿಹಾರ ಮಾತ್ರ ಶೂನ್ಯ’ ಎಂದು ವಿವಿಪುರದ ಎಸ್.ಎಸ್. ರಂಗಪ್ಪ ಆರೋಪಿಸುತ್ತಾರೆ.
‘2022ರಲ್ಲಿ ಕಕ್ಕಯ್ಯನಹಟ್ಟಿ ಭಾಗದ ಹಳ್ಳಿಯ ಜನರು ಕಿರಿದಾದ ರಸ್ತೆಯಲ್ಲಿ ಬಸ್ ಓಡಾಟದಿಂದ ನಿತ್ಯ ತೊಂದರೆ ಅನುಭವಿಸಲಾರದೆ ವಿರೋಧ ವ್ಯಕ್ತಪಡಿಸಿದ್ದರು. ಒಂದು ಬಸ್ ಸಂಚರಿಸುವಷ್ಟು ಅಗಲವಾದ ರಸ್ತೆ ನಮ್ಮದು. ಕೆಲವೊಮ್ಮೆ ಎರಡು ದೊಡ್ಡ ವಾಹನಗಳು ಎದುರಾದರೆ ಸಂಚಾರ ಸಂಪೂರ್ಣ ಬಂದ್ ಆಗುತ್ತದೆ. ಆಗ ತುರ್ತಾಗಿ ನಮ್ಮ ಹೊಲಗಳಿಗೆ ಹೋಗಲೂ ಜಾಗ ಇರುವುದಿಲ್ಲ. ಅಲ್ಲದೆ ಬೃಹತ್ ಗಾತ್ರದ ವಾಹನಗಳ ಓಡಾಟದಿಂದ ರಸ್ತೆಯೂ ಹಾಳಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದ್ದರು.
ತಾತ್ಕಾಲಿಕ ಸೇತುವೆ: 2023ರ ಜನವರಿಯಲ್ಲಿ ವಾಣಿವಿಲಾಸಪುರದ ಗ್ರಾಮಸ್ಥರು, ಖಾಸಗಿ ಬಸ್ ಮಾಲೀಕರ ಸಂಘದವರು ಅಂದಾಜು ₹ 70,000 –₹ 80,000 ಖರ್ಚು ಮಾಡಿ 8 ಬೃಹತ್ ಗಾತ್ರದ ಸಿಮೆಂಟ್ ಪೈಪ್ಗಳನ್ನು ಒಂದಕ್ಕೊಂದು ಹೊಂದಿಸಿ ಕೋಡಿಯ ಜಾಗದಲ್ಲಿ ಕಿತ್ತು ಹೋಗಿದ್ದ ರಸ್ತೆಗೆ ಜೋಡಿಸಿ ನೀರು ಹರಿದು ಹೋಗುವಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದರು. ಜೆಸಿಬಿ ಹಾಗೂ ಟ್ರ್ಯಾಕ್ಟರ್ ಬಳಸಿ ರಸ್ತೆಯ ಎರಡೂ ಕಡೆ ಕೋಡಿಯ ನೀರಿನಲ್ಲಿ ಕೊಚ್ಚಿ ಹೋಗಿ ಗುಂಡಿ ಬಿದ್ದಿದ್ದ ಜಾಗಕ್ಕೆ ಮಣ್ಣುತುಂಬಿ ವಾಹನಗಳು ಓಡಾಡಲು ಅನುವಾಗುವಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದರು.
ವಾಣಿವಿಲಾಸ ಜಲಾಶಯ ಅ. 19ರಂದು 4ನೇ ಬಾರಿಗೆ ಕೋಡಿ ಬಿದ್ದಿದ್ದು, ಅಂದಿನಿಂದ ಮರಳಿ ಕಕ್ಕಯ್ಯನಹಟ್ಟಿ ಮಾರ್ಗವಾಗಿ ಹಿರಿಯೂರು–ಹೊಸದುರ್ಗ ನಡುವೆ ಬಸ್ಗಳ ಓಡಾಟ ಮುಂದುವರಿದಿದೆ. ಇದರಿಂದ ಎರಡು ನಗರಗಳ ನಡುವಿನ ಸಂಚಾರದ ಅವಧಿ ಅರ್ಧಗಂಟೆ ಹೆಚ್ಚಾಗುತ್ತದೆ ಎಂಬುದು ಪ್ರಯಾಣಿಕರ ಬೇಸರ.
2022ರಿಂದ ಇಲ್ಲಿಯವರೆಗೆ ಜಲಾಶಯ 3 ಬಾರಿ ಕೋಡಿ ಬಿದ್ದಿದೆ. ಕೋಡಿ ಬಿದ್ದಾಗಲೆಲ್ಲ ಹೊಸದುರ್ಗ– ಹಿರಿಯೂರು ನಡುವೆ ಸಂಚರಿಸುವ ಎಲ್ಲ ವಾಹನಗಳು ಕಕ್ಕಯ್ಯನಹಟ್ಟಿ ಮೂಲಕವೇ ಸಾಗುತ್ತಿವೆ.
‘ಹೊಸದುರ್ಗ, ಮಾಡದಕೆರೆ, ಲಕ್ಕಿಹಳ್ಳಿ, ಕುಂಟಪ್ಪನಹಟ್ಟಿ, ತಳವಾರಹಟ್ಟಿ, ಕಕ್ಕಯ್ಯನಹಟ್ಟಿ ಮೂಲಕ ರೈತರು ನಿತ್ಯ ವಾಣಿವಿಲಾಸಪುರದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲು ತರಬೇಕು. ಬೈಕ್ನಲ್ಲಿ ಹಾಲಿನ ಕ್ಯಾನ್ ಇಟ್ಟುಕೊಂಡು ಬರುವಾಗ ಬಸ್ಗಳು ಎದುರಾದರೆ ಸರ್ಕಸ್ನಲ್ಲಿ ತಂತಿಯ ಮೇಲೆ ನಡೆಯುವಂತಹ ಅನುಭವ ಆಗುತ್ತದೆ. ಎಷ್ಟೋ ಬಾರಿ ಬೈಕ್ನಿಂದ ಬಿದ್ದು ಕ್ಯಾನ್ಗಳಲ್ಲಿದ್ದ ಹಾಲೆಲ್ಲ ರಸ್ತೆ ಪಾಲಾಗಿರುವುದುಂಟು. ರಾತ್ರಿ ವೇಳೆ ರಸ್ತೆ ಬದಿಯಲ್ಲಿರುವ ಬೇಲಿಯ ಮುಳ್ಳು ವಾಹನ ಸವಾರರ ಮುಖಕ್ಕೆ ಬಡಿಯುತ್ತವೆ. ರಸ್ತೆ ಸರಿಪಡಿಸಿ ಎಂದು ಜನಪ್ರತಿನಿಧಿಗಳಿಗೆ ಮಾಡಿರುವ ಮನವಿಗಳಿಗೆ ಲೆಕ್ಕವೇ ಇಲ್ಲ’ ಎಂದು ರಂಗಪ್ಪ ಬೇಸರ ವ್ಯಕ್ತಪಡಿಸಿದರು.
‘ಕೋಡಿ ಭಾಗದಲ್ಲಿ ಸೇತುವೆ ನಿರ್ಮಿಸುವವರೆಗೆ ಕಕ್ಕಯ್ಯನಹಟ್ಟಿ ಮಾರ್ಗದಲ್ಲಿ ರಸ್ತೆ ಬದಿಯಲ್ಲಿ ಬೆಳೆದಿರುವ ಮುಳ್ಳುಕಂಟಿ ತೆಗೆಸಬೇಕು. ಅದೇನು ಅಂತಹ ದೊಡ್ಡ ಸಮಸ್ಯೆ ಅಲ್ಲ. ಗ್ರಾಮ ಪಂಚಾಯಿತಿಯವರು ಇಚ್ಛಾಶಕ್ತಿ ಪ್ರದರ್ಶಿಸಬೇಕು’ ಎಂಬುದು ಸ್ಥಳೀಯರ ಆಗ್ರಹ.
ಕಕ್ಕಯ್ಯನಹಟ್ಟಿಯಿಂದ ಭರಮಗಿರಿ ಬೈಪಾಸ್ ರಸ್ತೆವರೆಗಿನ ಎರಡೂ ಬದಿಯ ಮುಳ್ಳು ತೆಗೆಸಲು ಶುಕ್ರವಾರ ನಡೆದ ಗ್ರಾಮ ಪಂಚಾಯಿತಿ ಸಭೆಯಲ್ಲಿ ತೀರ್ಮಾನಿಸಿದ್ದೇವೆ. ಐದಾರು ದಿನಗಳಲ್ಲಿ ಕಾಮಗಾರಿ ಆರಂಭಿಸುತ್ತೇವೆ.–ಗಂಗಮ್ಮ ಉಮೇಶ್, ಅಧ್ಯಕ್ಷೆ ವಾಣಿವಿಲಾಸಪುರ ಗ್ರಾ.ಪಂ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.