ಚಳ್ಳಕೆರೆ: ಲಾಕ್ಡೌನ್ ಹಿನ್ನೆಲೆಯಲ್ಲಿ ಕೊಹಿನೂರು ಕರಬೂಜ, ಕಲ್ಲಂಗಡಿ ಹಾಗೂ ಟೊಮೆಟೊ ಬೆಳೆಗಳನ್ನು ಸಾಗಿಸಲಾಗದೆ ಬೆಳೆಗಾರರು ಆತಂಕದಲ್ಲಿದ್ದಾರೆ.
ತಾಲ್ಲೂಕಿನ ಗಡಿ ಭಾಗದ ಬಸಾಪುರ ಗ್ರಾಮದ ಕಂಬಳಿ ಈರಣ್ಣ ಮತ್ತು ಪುತ್ರ ನೀಲೇಶ್ 13 ಎಕರೆಯಲ್ಲಿ ಕೊಹಿನೂರು ಕರಬೂಜ, 14 ಎಕರೆಯಲ್ಲಿ ಕಲ್ಲಂಗಡಿ ಮತ್ತು 13 ಎಕರೆಯಲ್ಲಿ ಟೊಮೆಟೊ ಸೇರಿ ವಿವಿಧ ಬೆಳೆ ಬೆಳೆದಿದ್ದಾರೆ. ಕೈಸಾಲದ ಜೊತೆಗೆ ದುಡಿಮೆಯ ಹಣವನ್ನೂ ವ್ಯಯಿಸಿದ್ದಾರೆ.
ಸದ್ಯ, 60 ಟನ್ ಕರಬೂಜ, 50 ಟನ್ ಕಲ್ಲಂಗಡಿ ಫಲವನ್ನು ಕಟಾವ್ ಮಾಡಲಾಗದೆ ಹೊಲದಲ್ಲಿಯೇ ಬಿಟ್ಟಿದ್ದಾರೆ. 13 ಎಕರೆಯಲ್ಲಿ ಟೊಮೆಟೊ ಬೆಳೆ ಗಿಡದಲ್ಲಿಯೇ ಒಣಗಿಹೋಗಿದೆ. ಇದರಿಂದ ಕನಿಷ್ಠ ₹ 40 ಲಕ್ಷ ನಷ್ಟ ಅನುಭವಿಸುವಂತಾಗಿದೆ.
ಉಳುಮೆ, ಬೀಜ-ಗೊಬ್ಬರ, ಔಷಧ ಹಾಗೂ ಡ್ರಿಪ್ ಸೇರಿ ₹ 25 ಲಕ್ಷಕ್ಕೂ ಹೆಚ್ಚು ವೆಚ್ಚವಾಗಿತ್ತು. ಈಗ ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದೆ ಎಂದು ಈರಣ್ಣ ಬೇಸರಿಸಿದರು.
‘ಅಧಿಕಾರಿಗಳನ್ನು ಸಂಪರ್ಕಿಸಿ, ಅಳಿದುಳಿದ ಬೆಳೆಯನ್ನು ಮಾರಾಟ ಮಾಡುವ ಸಲುವಾಗಿ ಶಿರಾ, ಮಂಗಳೂರು, ಬೆಂಗಳೂರು ಹಾಗೂ ಮೈಸೂರು ಭಾಗದ ಖರೀದಿದಾರರನ್ನು ವಿಚಾರಿಸಿದೆ. ಆದರೆ ಯಾವ ಬೆಳೆಯೂ ಬೇಡ ಎಂಬ ಉತ್ತರ ಸಿಕ್ಕಿದೆ’ ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.