ADVERTISEMENT

ದಕ್ಷಿಣ ಕನ್ನಡ: 204 ಮಂದಿಗೆ ಕೋವಿಡ್‌, 70 ಜನ ಗುಣಮುಖ

ಐಎಲ್‌ಐ, ಪ್ರಾಥಮಿಕ ಸಂಪರ್ಕದಿಂದಲೇ ಹೆಚ್ಚಿನ ಜನರಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 16:32 IST
Last Updated 31 ಜುಲೈ 2020, 16:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 204 ಜನರಿಗೆ ಕೋವಿಡ್–19 ದೃಢವಾಗಿದ್ದು, ಸೋಂಕಿತರ ಸಂಖ್ಯೆ 5,713ಕ್ಕೆ ಏರಿದೆ. 70 ಮಂದಿ ಗುಣಮುಖರಾಗಿದ್ದು, ಮೃತಪಟ್ಟಿರುವ ಐದು ಮಂದಿಗೆ ಕೋವಿಡ್‌–19 ಇರುವುದು ಖಚಿತವಾಗಿದೆ.

ದೃಢಪಟ್ಟಿರುವ ಪ್ರಕರಣಗಳ ಪೈಕಿ, ಪ್ರಾಥಮಿಕ ಸಂಪರ್ಕದಿಂದ 75 ಜನರಿಗೆ ಸೋಂಕು ತಗಲಿದೆ. ಇನ್ನೂ ಐಎಲ್‌ಐ 63 ಮತ್ತು ಎಸ್‌ಎಆರ್‌ಐ 14 ಪ್ರಕರಣಗಳು ವರದಿಯಾಗಿವೆ. 52 ಜನರ ಸೋಂಕಿನ ಸಂಪರ್ಕವನ್ನು ಪತ್ತೆ ಮಾಡಲಾಗುತ್ತಿದೆ.

ಐದು ಮಂದಿ ಸಾವು: ನಗರದ ಖಾಸಗಿ ಮತ್ತು ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐವರು ಗುರುವಾರ ಮೃತಪಟ್ಟಿದ್ದು, ಅವರಿಗೆ ಕೋವಿಡ್‌ ಇರುವುದು ಶುಕ್ರವಾರ ದೃಢವಾಗಿದೆ.

ADVERTISEMENT

ನಗರದ ನಿವಾಸಿಗಳಾದ 47 ವರ್ಷದ ವ್ಯಕ್ತಿ, 63 ಹಾಗೂ 75 ವರ್ಷದ ವೃದ್ಧರು, ಬಂಟ್ವಾಳದ 76 ವರ್ಷದ ವೃದ್ಧ ಹಾಗೂ ದಾವಣಗೆರೆಯ 88 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ. ಈ ಐವರಿಗೂ ಗಂಭೀರ ಸ್ವರೂಪದ ಇತರ ಕಾಯಿಲೆಗಳಿದ್ದು, ನಾಲ್ವರು ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ನಗರದ 75 ವರ್ಷದ ವೃದ್ಧ ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಶುಕ್ರವಾರ ಮತ್ತೆ 70 ಮಂದಿ ಗುಣಮುಖರಾಗಿದ್ದಾರೆ. ಖಾಸಗಿ ಆಸ್ಪತ್ರೆ, ವೆನ್ಲಾಕ್‌ ಹಾಗೂ ಹೋಂ ಐಸೋಲೇಷನ್‌ನಲ್ಲಿ ಇವರ ಗಂಟಲು ದ್ರವದ ಮಾದರಿ ನೆಗೆಟಿವ್‌ ಬಂದಿದ್ದು, ಮನೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ.

ಕಾಸರಗೋಡು: 129 ಮಂದಿ ಗುಣಮುಖ
ಕಾಸರಗೋಡು ಜಿಲ್ಲೆಯಲ್ಲಿ ಒಂದೇ ದಿನ 129 ಮಂದಿ ಕೋವಿಡ್–19 ನಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 615 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಶುಕ್ರವಾರ 52 ಜನರಿಗೆ ಕೋವಿಡ್– 19 ದೃಢಪಟ್ಟಿದೆ. ಎಂಟು ಜನರ ಸಂಪರ್ಕದ ಮಾಹಿತಿಯನ್ನು ಕಲೆ ಹಾಕುತ್ತಿದ್ದು, 47 ಜನರಿಗೆ ಪ್ರಾಥಮಿಕ ಸಂಪರ್ಕದಿಂದ ಕೋವಿಡ್ ದೃಢಪಟ್ಟಿದೆ. ವಿದೇಶದಿಂದ ಬಂದ ಇಬ್ಬರು ಮತ್ತು ಬೇರೆ ರಾಜ್ಯಗಳಿಂದ ಬಂದ ಮೂವರಲ್ಲಿ ಸೋಂಕು ಖಚಿತವಾಗಿದೆ.

**
ಅಶಕ್ತ ಜನರ ಮೇಲೆ ನಿರಂತರ ನಿಗಾ ಇಡಲಾಗುತ್ತಿದೆ. ಅವರಲ್ಲಿ ರೋಗ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಆಸ್ಪತ್ರೆ ದಾಖಲಿಸಲಾಗುವುದು. ಈ ಮೂಲಕ ಸಾವಿನ ಪ್ರಮಾಣ ತಗ್ಗಿಸಲಾಗುವುದು.
-ಡಾ.ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.