ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಕೃಷಿ ಇಲಾಖೆ ಕಚೇರಿ ಬಳಿ ನಿರ್ಮಾಣಗೊಂಡಿರುವ ಹೊಸ ಹೆಚ್ಚುವರಿ ಗೋದಾಮು ಉದ್ಘಾಟನೆಗೆ ಮುನ್ನವೇ ಸೋರುತ್ತಿದೆ. ಮೊದಲ ಮಳೆಗೇ ಕಾಮಗಾರಿಯ ಗುಣಮಟ್ಟದ ಬಹಿರಂಗಗೊಂಡಿದೆ.
ಕಳೆದ ಸಾಲಿನಲ್ಲಿ ಕೃಷಿ ಇಲಾಖೆ ವತಿಯಿಂದ ಮಂಜೂರಾದ ಜಿಲ್ಲೆಯ ಎರಡು ರೈತ ಸಂಪರ್ಕ ಕೇಂದ್ರಗಳ ಗೋದಾಮುಗಳ ಪೈಕಿ ಒಂದು ಗೋದಾಮು ಇಲ್ಲಿ ನಿರ್ಮಾಣವಾಗಿತ್ತು. ಕೆಆರ್ಐಡಿಎಲ್ ವತಿಯಿಂದ ನಿರ್ಮಿತಿ ಕೇಂದ್ರದ ಮೂಲಕ ₹ 15 ಲಕ್ಷ ವೆಚ್ಚದಲ್ಲಿ ಇದು ನಿರ್ಮಾಣವಾಗಿದೆ. ಕಾಂಕ್ರೀಟ್ ಕಟ್ಟಡದಂತೆ ಕಾಣುತ್ತದೆ. ಆದರೆ, ಸಿಮೆಂಟ್, ಇಟ್ಟಿಗೆಯಲ್ಲಿ ಕಟ್ಟಿದ ಗೋಡೆಗೆ ಫೈಬರ್ ಶೀಟ್ ಅಳವಡಿಸಲಾಗಿದೆ. ಎದುರು ಭಾಗದಲ್ಲಿ ಕಾಂಕ್ರೀಟ್ ಕಟ್ಟಡದಂತೆ ಕಾಣುವಂತೆ ತಂತ್ರಜ್ಞಾನ ಅಳವಡಿಸಲಾಗಿದೆ. ಈ ಗೋದಾಮು ತಲುಪಲು ದಾರಿ ಕೂಡ ಸರಿಯಾಗಿಲ್ಲ ಎಂಬುದು ಸ್ಥಳೀಯರ ಆರೋಪ.
ಕೃಷಿ ಇಲಾಖೆ ಕಚೇರಿ ಮಾಡಿನ ನೀರು ಕೂಡ ಈ ಗೋದಾಮಿನ ಗೋಡೆಯ ಮೇಲೆ ಸುರಿಯುತ್ತದೆ. ಇಲ್ಲಿ ಬಿತ್ತನೆ ಬೀಜ ಸಹಿತ ರಸಗೊಬ್ಬರ, ಸುಣ್ಣ ಸಂಗ್ರಹಿಸಿದರೆ ಅದು ಗುಣಮಟ್ಟದಿಂದ ಇರಲು ಸಾಧ್ಯವಿಲ್ಲ ಎಂದು ರೈತರೊಬ್ಬರು ಆರೋಪಿಸಿದರು.
ಪಾಣೆಮಂಗಳೂರು ರೈತ ಸಂಪರ್ಕ ಕೇಂದ್ರಕ್ಕೆ ಸ್ವಂತ ಕಟ್ಟಡವೂ ಇಲ್ಲದೆ ನಿವೇಶನಕ್ಕಾಗಿ ಕಂದಾಯ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ವಾರ್ಷಿಕ ₹ 66 ಸಾವಿರ ಬಾಡಿಗೆ ನೀಡಿ, ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಿಟ್ಲ ರೈತ ಸಂಪರ್ಕ ಕೇಂದ್ರಕ್ಕೆ ಉಕ್ಕುಡದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ಹಡಿಲು ಗದ್ದೆಯಲ್ಲಿ ಭತ್ತದ
ಬೆಳೆಯಲು ಕೃಷಿ ಇಲಾಖೆ ಕೇವಲ ಯಂತ್ರೋಪಕರಣ ಮಾತ್ರ ಒದಗಿಸುತ್ತಿದ್ದು, ಎಕರೆಗೆ ತಲಾ ₹ 5,000 ಪ್ರೋತ್ಸಾಹಧನ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.