ADVERTISEMENT

ಮಕ್ಕಳನ್ನು ಟಿಪ್ಪರ್‌ನಲ್ಲಿ ಅಧ್ಯಯನಕ್ಕೆ ಕರೆದೊಯ್ದ ಮುಖ್ಯಶಿಕ್ಷಕ ಕಿರಣ್ ಅಮಾನತು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 7:31 IST
Last Updated 13 ಫೆಬ್ರುವರಿ 2026, 7:31 IST
ಬಳಂಜ ಶಾಲೆಯ ವಿದ್ಯಾರ್ಥಿಗಳನ್ನು ಟಿಪ್ಪರ್‌ ಲಾರಿಯಲ್ಲಿ ಕರೆದೊಯ್ಯಲಾಗಿತ್ತು
ಬಳಂಜ ಶಾಲೆಯ ವಿದ್ಯಾರ್ಥಿಗಳನ್ನು ಟಿಪ್ಪರ್‌ ಲಾರಿಯಲ್ಲಿ ಕರೆದೊಯ್ಯಲಾಗಿತ್ತು   

ಬೆಳ್ತಂಗಡಿ: ತಾಲ್ಲೂಕಿನ ಬಳಂಜ ಗ್ರಾಮದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಟಿಪ್ಪರ್‌ ಲಾರಿಯಲ್ಲಿ ಹತ್ತಿಸಿಕೊಂಡು ನರ್ಸರಿಗೆ ಅಧ್ಯಯನಕ್ಕೆ ಕರೆದೊಯ್ದ ಬಗ್ಗೆ ಅದೇ ಗ್ರಾಮದ ಧರಣೇಂದ್ರ ಅವರು ದೂರು ನೀಡಿದ್ದು ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಳಂಜದ ಪ್ರಭಾರ ಮುಖ್ಯಶಿಕ್ಷಕ ಕಿರಣ್‌ ಅವರು ವಿದ್ಯಾರ್ಥಿಗಳನ್ನು ಟಿಪ್ಪರ್‌ ಲಾರಿಯಲ್ಲಿ ಹತ್ತಿಸಿಕೊಂಡು ಅಧ್ಯಯನಕ್ಕೆ ಕರೆದೊಯ್ದಿದ್ದರು. ಅವರನ್ನು ಅಮಾನತು ಮಾಡಿ, ಶಿಸ್ತುಕ್ರಮ ಕೈಗೊಳ್ಳಲಾಗಿದೆ ಎಂದು ಡಿಡಿಪಿಐ ಎಚ್‌.ಎಸ್.ಶಶಿಧರ್ ತಿಳಿಸಿದ್ದಾರೆ.

ಬಳಂಜ ಶಾಲೆಯಲ್ಲಿ ಈಚೆಗೆ ಶತಮಾನೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗಿತ್ತು. ಇದಕ್ಕಾಗಿ ಕಿರಣ್‌ ಅವರ ಪ್ರಯತ್ನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಅವರು ವಿದ್ಯಾರ್ಥಿಗಳನ್ನು ಜೇನ್ನೊಣಗಳ ಅಧ‌ಯನಕ್ಕಾಗಿ ನಾಲ್ಕೂರಿನ ಅನಿಲ್ ಫಾರ್ಮ್‌ ನರ್ಸರಿಗೆ ಮಂಗಳವಾರ ಕರೆದೊಯ್ದಿದ್ದರು. ಮಕ್ಕಳು ಟಿಪ್ಪರ್‌ ಲಾರಿಯಲ್ಲಿ ಪ್ರಯಾಣಿಸುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಮಕ್ಕಳ ಸುರಕ್ಷತೆಗೆ ಅಧ್ಯಾಪಕರು ಕ್ರಮ ವಹಿಸದ ಬಗ್ಗೆ ಟೀಕೆ ವ್ಯಕ್ತವಾಗಿತ್ತು. 

ADVERTISEMENT

ಮಕ್ಕಳನ್ನು ಲಾರಿಯಲ್ಲಿ ಹತ್ತಿಸಿಕೊಂಡು ಕರೆದೊಯ್ದ ಶಾಲೆಯವರ ಬಗ್ಗೆ ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.