ಸುಳ್ಯ: ಹತ್ಯೆಯಾದ ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಅವರ ಮೃತ ದೇಹದ ಅಂತಿಮ ಯಾತ್ರೆಯ ಮೆರವಣಿಗೆ 1 ಗಂಟೆ ಸುಮಾರಿಗೆ ಬೆಳ್ಳಾರೆ ತಲುಪಿದೆ.
ಈ ವೇಳೆ ಅಂತಿಮ ದರ್ಶನ ಪಡೆಯಲು ಬಂದ ಬಿಜೆಪಿ ನಾಯಕರಿಗೆ ಹಾಗೂ ಆರ್ಎಸ್ಎಸ್ ಮುಖಂಡರಿಗೆ ಘೇರಾವ್ ಹಾಕಿ, ದಿಕ್ಕಾರ ಕೂಗಿ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಇದರಿಂದ ಕೆಲ ಕಾರ್ಯಕರ್ತರು ಗಾಯಗೊಂಡಿದ್ದಾರೆ.
ನ್ಯಾಯಕ್ಕಾಗಿ ಆಗ್ರಹಿಸಿದ ಕಾರ್ಯಕರ್ತರು ಸಂಸದ ನಳೀನ್ ಕುಮಾರ್ ಕಟೀಲ್, ಸಚಿವರಾದ ಸುನೀಲ್ ಕುಮಾರ್, ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಕರವಾಳಿ ಭಾಗದ ಬಿಜೆಪಿ ಶಾಸಕರು ಕಾರ್ಯಕರ್ತರ ಆಕ್ರೋಶದ ಬಿಸಿ ಅನುಭವಿಸಿದರು.
ಮುಖಂಡರಿಗೆ ಮಾತನಾಡಲು ಅವಕಾಶ ನೀಡದ ಕಾರ್ಯಕರ್ತರು ತೀವ್ರ ತರಾಟೆಗೆ ತೆಗೆದುಕೊಂಡರು. ಕಾರ್ಯಕರ್ತರನ್ನು ಸಮಧಾನ ಪಡಿಸಲು ಸಾಧ್ಯವಾಗದೇ ಈ ನಾಯಕರು ದಿಙ್ಮೂಢರಾದರು. ಕೊನೆಗೆ ಕಾರ್ಯಕರ್ತರ ಬೈಗುಳಗಳ ತೀವ್ರತೆಯನ್ನು ತಾಳಲಾಗದೇ ಅಲ್ಲಿಂದ ಜಾಗ ಖಾಲಿ ಮಾಡಲು ಪ್ರಯತ್ನಿಸಿದಾಗ ಕಾರ್ಯಕರ್ತರು ಇನ್ನಷ್ಟು ಆಕ್ರೋಶಗೊಂಡರು.
ನಳಿನ್ , ಸಚಿವ ಸುನೀಲ್ ಕುಮಾರ್ ಹಾಗೂ ಪ್ರಭಾಕರ ಭಟ್ ಕಾರಿನಲ್ಲಿ ಕೂತಾಗ ಆ ಕಾರನ್ನು ಘೇರಾವ್ ಹಾಕಿದ ಕಾರ್ಯಕರ್ತರು ಅದರ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಹೆಲ್ಮೇಟ್ ನಿಂದಲೂ ಹಲ್ಲೆ ಮಾಡಲು ಯತ್ನಿಸಿದ್ದಾರೆ.
ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.