ADVERTISEMENT

ಕಾಂಗ್ರೆಸ್‌ನಿಂದ ‘ಬ್ರೇಕ್‌ ದಿ ಚೈನ್‌’ ಅಭಿಯಾನ

ಕಾಂಗ್ರೆಸ್‌ನಿಂದ ‘ಬ್ರೇಕ್‌ ದಿ ಚೈನ್‌’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 5:00 IST
Last Updated 22 ಏಪ್ರಿಲ್ 2021, 5:00 IST
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ‘ಬ್ರೇಕ್‌ ದಿ ಚೈನ್‌’ ಅಭಿಯಾನದ ಕರಪತ್ರವನ್ನು ಐವನ್‌ ಡಿಸೋಜ ಬಿಡುಗಡೆ ಮಾಡಿದರು.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ‘ಬ್ರೇಕ್‌ ದಿ ಚೈನ್‌’ ಅಭಿಯಾನದ ಕರಪತ್ರವನ್ನು ಐವನ್‌ ಡಿಸೋಜ ಬಿಡುಗಡೆ ಮಾಡಿದರು.   

ಮಂಗಳೂರು: ಕೋವಿಡ್ 2ನೇ ಅಲೆ ತಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ‘ನಮ್ಮ ಆರೋಗ್ಯ, ನಮ್ಮ ಹೊಣೆ’ ಪರಿಕಲ್ಪನೆಯಲ್ಲಿ ‘ಬ್ರೇಕ್ ದಿ ಚೈನ್’ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ, ‘ಕಾಂಗ್ರೆಸ್ ಕೋವಿಡ್ ಸಹಾಯವಾಣಿಯ ಮೂಲಕ ಈ ಅಭಿಯಾನ ನಡೆಯಲಿದೆ’ ಎಂದರು.

ಎನ್‌ಎಸ್‌ಯುಐ ಹಾಗೂ ಕಾಂಗ್ರೆಸ್‌ನ ವಿವಿಧ ಘಟಕಗಳು ಅಭಿಯಾನದಲ್ಲಿ ಕೈಜೋಡಿಸಲಿವೆ. ಕೋವಿಡ್‌ಗೆ ಚಿಕಿತ್ಸೆ ಪಡೆಯುವುದು ಒಂದೆಡೆಯಾದರೆ, ಇನ್ನೊಂದೆಡೆ ಕೋವಿಡ್–19 ಹರಡುವುದನ್ನು ತೆಗಟ್ಟುವುದು ಅಷ್ಟೇ ಮುಖ್ಯವಾಗಿದೆ. ಇದಕ್ಕಾಗಿ ಅಸಂಘಟಿತ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು, ಅಂಗಡಿ, ಬಸ್‌ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ ಹಂಚಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ADVERTISEMENT

ಜಿಲ್ಲೆಯಲ್ಲಿ ಲಸಿಕೆ ಕೊರತೆ ಇದೆ. ತರಿಸಿಕೊಳ್ಳುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ. ಕೋವಿಡ್–19 ಹರಡುತ್ತಿರುವಾಗ ಲಸಿಕೆ ಸಂಗ್ರಹ ಇರಬೇಕಾಗಿತ್ತು. ಈ ಬಗ್ಗೆ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು ಮೌನವಾಗಿದ್ದಾರೆ ಎಂದು ದೂರಿದರು.

ಉಚಿತವಾಗಿ ಶವಸಂಸ್ಕಾರ ನಡೆಸಲು ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಶವ ಹೂಳುವವರಿಗೆ ನಿಗದಿತ ಸ್ಮಶಾನವನ್ನು ಗುರುತಿಸಬೇಕು. ಆಸ್ಪತ್ರೆಗಳಲ್ಲಿ ಕುಂದುಕೊರತೆ ನೋಡಿಕೊಳ್ಳಲು ಪ್ರತ್ಯೇಕ ನೋಡಲ್ ಅಧಿಕಾರಿ ನೇಮಿಸುವಂತೆ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದು, ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಸ್ಥಳೀಯ ಶಾಸಕರು ಭೂಮಿ ಪೂಜೆ, ಟ್ರಾಫಿಕ್ ಮೀಟಿಂಗ್‌ನಲ್ಲಿ ಬಿಸಿಯಾಗಿದ್ದಾರೆ. ಉಸ್ತುವಾರಿ ಸಚಿವರು ಉಡುಪಿಯಿಂದ ಹೊರಗೆ ಬರುತ್ತಿಲ್ಲ, ಇನ್ನೊಬ್ಬ ಸಚಿವರು ಎಲ್ಲಿದ್ದಾರೆ ಗೊತ್ತಿಲ್ಲ. ಕಾರ್ಮಿಕರು ಗುಳೆ ಹೋಗಲು ಮುಂದಾಗಿದ್ದು, ಅವರಿಗೆ ಧೈರ್ಯ ಹೇಳಿ ನಿಲ್ಲಿಸುವ ಕೆಲಸ ಮಾಡಬೇಕು. ಈ ಬಗ್ಗೆ ಯಾರೂ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.

ಕೋವಿಡ್ ನಿಯಂತ್ರಣ ವಿಷಯದಲ್ಲಿ ಜಿಲ್ಲಾಧಿಕಾರಿ ಮಾತ್ರ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿ ದ್ದಾರೆ. ಜಿಲ್ಲಾಧಿಕಾರಿಯನ್ನೇ ಮಂತ್ರಿ ಮಾಡಿದರೆ ಒಳ್ಳೆಯದು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮುಹಮ್ಮದ್ ಮೋನು, ಜಿಲ್ಲಾ ಪಂಚಾಯಿತಿ ಸದಸ್ಯ ಶಾಹುಲ್ ಹಮೀದ್, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮುಖಂಡರಾದ ಅಶೋಕ್, ಸವದ್, ಭಾಸ್ಕರ್ ರಾವ್, ಪ್ರಕಾಶ್ ಸಾಲ್ಯಾನ್, ಅಶಿತ್ ಪಿರೇರಾ, ವಿವೇಕ್‌ರಾಜ್, ಅಪ್ಪಿ ಇದ್ದರು.

ಲಸಿಕೆ ಅಭಿಯಾನ

ಕಾಂಗ್ರೆಸ್ ಸಹಾಯವಾಣಿಯಿಂದ ಏ.23ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಸದನದಲ್ಲಿ 45 ವರ್ಷ ಮೇಲಿನವರಿಗೆ ಲಸಿಕೆ ವ್ಯಾಕ್ಸಿನೇಷನ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬಿಜೈ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಈ ಅಭಿಯಾನ ನಡೆಯಲಿದೆ ಎಂದು ಐವನ್ ಡಿಸೋಜ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.