
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಕುಕ್ಕೆ ಸುಬ್ರಹ್ಮಣ್ಯ ದೇವರ ಹೂವಿನ ತೇರಿನ ಉತ್ಸವ ನೆರವೇರಲಿದೆ. ದೇವರ ಮಹಾಪೂಜೆಯ ಬಳಿಕ ಹೊರಾಂಗಣದಲ್ಲಿ ಬಂಡಿ ಉತ್ಸವ ಹಾಗೂ ಪಾಲಕಿ ಉತ್ಸವ ನೆರವೇರಲಿದೆ.
ಬಳಿಕ ಉತ್ತರಾದಿ ಮಠದಲ್ಲಿ ಮಯೂರ ವಾಹನ ಸುಬ್ರಹ್ಮಣ್ಯ ದೇವರಿಗೆ ಪೂಜೆ ನಡೆಯಲಿದೆ. ನಂತರ ಸುಬ್ರಹ್ಮಣ್ಯ ದೇವರು, ಮಹಾಗಣಪತಿಯ ಸಮಾಗಮ ನೆರವೇರಲಿದೆ. ವಾಸುಕಿ ಕಟ್ಟೆಯಲ್ಲಿ ಶಿವರಾತ್ರಿ ಕಟ್ಟೆ ಮತ್ತು ಸವಾರಿ ಮಂಟಪದ ಸವಾರಿ ಕಟ್ಟೆಯಲ್ಲಿ ಕಟ್ಟೆಪೂಜೆ ನಡೆಯಲಿದೆ. ಮೂರು ದಿನ ದೇವಳದ ಒಳಾಂಗಣದಲ್ಲಿ ಭಕ್ತರು ಸ್ವಯಂಪ್ರೇರಿತರಾಗಿ ಎಡೆಸ್ನಾನ ಸೇವೆ ನೆರವೇರಿಸಲಿದ್ದಾರೆ.
ದೇವಳದ ಗೋಪುರ, ದೇವಳ, ಆದಿಸುಬ್ರಹ್ಮಣ್ಯ, ಕಾಶಿಕಟ್ಟೆ, ಬಿಲದ್ವಾರ, ಕುಮಾರಧಾರ ದ್ವಾರ, ಸವಾರಿ ಮಂಟಪ, ಸವಾರಿ ಮಂಟಪ ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿದೆ.
ಇಂದಿನಿಂದ ಸೇವೆಗಳಲ್ಲಿ ವ್ಯತ್ಯಯ: ಚಂಪಾಷಷ್ಠಿ ದಿನ ಆಶ್ಲೇಷಾ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ನಡೆಯುವುದಿಲ್ಲ. ಚೌತಿ, ಪಂಚಮಿ ಮತ್ತು ಷಷ್ಠಿಯಂದು ಮಹಾಭಿಷೇಕ ಸೇವೆ ನಡೆಯುವುದಿಲ್ಲ. ಈ ದಿನಗಳಲ್ಲಿ ರಾತ್ರಿ ಪ್ರಾರ್ಥನೆ ಸೇವೆ ನೆರವೇರುವುದಿಲ್ಲ. ಪಂಚಮಿ ದಿನ ಮಧ್ಯಾಹ್ನ ಮತ್ತು ರಾತ್ರಿ, ಷಷ್ಠಿ ದಿನ ಮಧ್ಯಾಹ್ನ ಪ್ರಾರ್ಥನೆ ಇರುವುದಿಲ್ಲ ಎಂದು ದೇವಳದ ಪ್ರಕಟಣೆ ತಿಳಿಸಿದೆ.
ಮಯೂರ ವಾಹನೋತ್ಸವ: ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಶೇಷವಾಹನೋತ್ಸವ ನಡೆಯಿತು. ಮಹಾಪೂಜೆಯ ನಂತರ ದೇವರ ಹೊರಾಂಗಣ ಉತ್ಸವಗಳು ಆರಂಭವಾದವು. ಪಂಚಶಿಖರಗಳನ್ನು ಒಳಗೊಂಡ ಚಂದ್ರ ಮಂಡಲ ರಥದಲ್ಲಿ ದೇವರ ಶೇಷ ವಾಹನೋತ್ಸವ ನೆರವೇರಿತು. ನಂತರ ಸವಾರಿ ಮಂಟಪದಲ್ಲಿರುವ ಅವಲಕ್ಕಿ ಕಟ್ಟೆಯಲ್ಲಿ ದೇವರ ಕಟ್ಟೆಪೂಜೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.