ಮಂಗಳೂರು: ‘ಶಿಕ್ಷಕಿಯಾಗಿರುವ ತಾಯಿ ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೆಚ್ಚುತ್ತಿರುವ ಬಿಲ್ ಮೊತ್ತವನ್ನು ಪಾವತಿಸಲೂ ಕೋವಿಡ್ ಸೋಂಕಿಗೆ ತುತ್ತಾಗಿರುವ ತಂದೆಗೂ ಸಾಧ್ಯವಾಗುತ್ತಿಲ್ಲ. ನೆರವಿಗೆ ಧಾವಿಸಿ’ ಎಂದು ಮೂಡುಬಿದಿರೆ ಶಿರ್ತಾಡಿಯ ಜವಾಹರಲಾಲ್ ನೆಹರೂ ಮಕ್ಕಿ ಅನುದಾನಿತ ಪ್ರೌಢಶಾಲೆಯ ಶಿಕ್ಷಕಿ ಪದ್ಮಾಕ್ಷಿ ಎನ್. ಅವರ ಪುತ್ರಿ ಐಶ್ವರ್ಯಾ ಮತ್ತು ಪುತ್ರ ಅನೈ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ.
ಮೂಡುಬಿದಿರೆಯ ಡಿ.ಜೆ. ಹಿರಿಯ ಪ್ರಾಥಮಿಕ ಅನುದಾನಿತ ಶಾಲೆಯಲ್ಲಿ ಶಿಕ್ಷಕರಾಗಿರುವ ತಂದೆ ಶಶಿಕಾಂತ್ ವೈ. ಹಾಗೂ ತಾಯಿ ಪದ್ಮಾಕ್ಷಿ ಆರೋಗ್ಯವಾಗಿದ್ದರು. ಆದರೆ, ವಿದ್ಯಾಗಮ ತರಗತಿಗಳು ಆರಂಭಗೊಂಡ ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದು, ಸೆಪ್ಟೆಂಬರ್ 29ರಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಪ್ಪ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆದರೆ, ಅಮ್ಮ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದು, ಈಗಾಗಲೇ ಚಿಕಿತ್ಸಾ ವೆಚ್ಚವು ₹6 ಲಕ್ಷ ದಾಟಿದೆ.ಆಸ್ಪತ್ರೆಯಲ್ಲಿ ಶೇ 90 ಆಮ್ಲಜನಕ ನೆರವಿನ ಮೂಲಕ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೆಚ್ಚವನ್ನು ಭರಿಸಲು ನಮಗೆ ಕಷ್ಟವಾಗುತ್ತಿದೆ. ಹೀಗಾಗಿ, ನೆರವಿಗೆ ನೀವೇ (ಸರ್ಕಾರ) ಧಾವಿಸಿ ಎಂದು ವಿದ್ಯಾರ್ಥಿಗಳಾಗಿರುವ ಮಕ್ಕಳಿಬ್ಬರೂ (ಮೊ.8217059134 ಅಥವಾ 8073 947 927) ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.