ADVERTISEMENT

ದ. ಕನ್ನಡ | ಯುವತಿಗೆ ವಂಚಿಸಿದ‌ ಆರೋಪಿಯನ್ನು ಮೈಸೂರಿನಲ್ಲಿ ವಶಕ್ಕೆ ಪಡೆದ ಪೊಲೀಸರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ಚರ್ಚೆಗೆ‌ ಗ್ರಾಸವಾಗಿದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಜುಲೈ 2025, 8:35 IST
Last Updated 5 ಜುಲೈ 2025, 8:35 IST
   

ಮಂಗಳೂರು: ಸಹಪಾಠಿ‌ ಯುವತಿಯೊಂದಿಗೆ ಸ್ನೇಹ ಬೆಳೆಸಿ, ಆಕೆ ತಾಯಿಯಾಗುವಂತೆ ಮಾಡಿ, ವಂಚಿಸಿದ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಠಾಣೆಯ ಪೊಲೀಸರು ಮೈಸೂರಿನಲ್ಲಿ ವಶಕ್ಕೆ ಪಡೆದಿದ್ದಾರೆ.

ಪುತ್ತೂರಿನ ಬಿಜೆಪಿ ಮುಖಂಡ, ನಗರಸಭೆ ಸದಸ್ಯ ಜಗನ್ನಿವಾಸ ರಾವ್ ಪುತ್ರ ಕೃಷ್ಣ ಜೆ.‌ ರಾವ್ (21) ಬಂಧಿತ ಆರೋಪಿ.

ಆರೋಪಿಯನ್ನು ಶುಕ್ರವಾರ ರಾತ್ರಿ ಮೈಸೂರಿನಲ್ಲಿ ವಶಕ್ಕೆ ಪಡೆದು, ಮಹಿಳಾ ಠಾಣೆಗೆ ಕರೆತರಲಾಗಿದೆ‌‌. ಆರೋಪಿಯ ವಿಚಾರಣೆ ನಡೆಸಲಾಗುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ‌.

ADVERTISEMENT

ಏನಿದು ಪ್ರಕರಣ

'ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿದ್ದ ಸಹಪಾಠಿ ಯುವಕ, ನಾನು ಗರ್ಭಿಣಿ ಎಂದು ಗೊತ್ತಾದ ಮೇಲೆ ಮದುವೆಯಾಗಲು ನಿರಾಕರಿಸಿದ್ದು, ನ್ಯಾಯ ಒದಗಿಸಬೇಕು' ಎಂದು ಪುತ್ತೂರಿನ ಸಂತ್ರಸ್ತ ಯುವತಿ ಮಹಿಳಾ ಠಾಣೆಗೆ ಜೂನ್ 24ರಂದು ದೂರು ನೀಡಿದ್ದರು.‌ ಜೂನ್ 27 ರಂದು ಈ ಯುವತಿ ಪುತ್ತೂರಿನ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ‌ ನೀಡಿದ್ದರು‌. ಎಫ್ಐಆರ್ ದಾಖಲಾದ ಬೆನ್ನಲ್ಲೇ ಆರೋಪಿ ನಾಪತ್ತೆಯಾಗಿದ್ದ.

ನಂತರದ ಬೆಳವಣಿಗೆಯಲ್ಲಿ, ಸಂತ್ರಸ್ತ ಯುವತಿಯ ತಾಯಿ, ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, 'ನನ್ನ ಮಗಳಿಗೆ ಅನ್ಯಾಯವಾಗಿದೆ. ಸ್ಥಳೀಯ ಶಾಸಕರು, ಹಿಂದುತ್ವ ಸಂಘಟನೆಯ ಮುಖಂಡರು ಯಾರೂ ಸಹಾಯಕ್ಕೆ ಬರುತ್ತಿಲ್ಲ' ಎಂದು ನೋವು ಹೇಳಿಕೊಂಡಿದ್ದರು.

'ಈ ವಿಷಯಕ್ಕೆ ಸಂಬಂಧಿಸಿ ಎರಡು ತಿಂಗಳುಗಳ ಹಿಂದೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ, ಆರೋಪಿ ಯುವಕನ ಪಾಲಕರು ಬಂದು, ತಮ್ಮ‌ ಮಗನಿಗೆ 21 ವರ್ಷ ಆದ‌ ಕೂಡಲೇ ಮದುವೆ ಮಾಡಿಸುವುದಾಗಿ ಭರವಸೆ ನೀಡಿ, ಮುಚ್ಚಳಿಕೆ ಬರೆದುಕೊಟ್ಟಿದ್ದರು. ಸ್ಥಳೀಯ ಶಾಸಕ ಅಶೋಕ ಕುಮಾರ್ ರೈ, ಕರೆ ಮಾಡಿ, ದೂರು ದಾಖಲಿಸದಂತೆ ಮತ್ತು ಎಲ್ಲವನ್ನೂ ಸೌಹಾರ್ದದಿಂದ ಬಗೆಹರಿಸುವುದಾಗಿ ತಿಳಿಸಿದ್ದರು. ಆದರೆ, ಈಗ ಯಾರೂ ಸಹಾಯಕ್ಕೆ ಬರುತ್ತಿಲ್ಲ' ಎಂದು ದೂರಿದ್ದರು.

ಈ ಪ್ರಕರಣ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂತ್ರಸ್ತ ಯುವತಿಗೆ ಹಲವರು ಬೆಂಬಲ ಸೂಚಿಸಿದ್ದಾರೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.