
ಪ್ರಜಾವಾಣಿ ಚಿತ್ರ
ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ತನ್ನ ವ್ಯಾಪ್ತಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಹಾಲು ಹಾಕುವ ಸದಸ್ಯರಿಗೆ ಪ್ರತಿ ಲೀಟರ್ ಹಾಲಿಗೆ ₹1 ಹೆಚ್ಚುವರಿ ಪ್ರೋತ್ಸಾಹಧನ ನೀಡಲಿದೆ.
21.2.2026 ರಿಂದ 31.5.2026ರ ವರೆಗೆ ಅನ್ವಯವಾಗುವಂತೆ ಪ್ರತಿ ಲೀಟರ್ ಹಾಲಿಗೆ ₹1 ಹೆಚ್ಚುವರಿ ಪ್ರೋತ್ಸಾಹಧನ ನೀಡಲು ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರಿಂದಾಗಿ ಒಕ್ಕೂಟವು ನಿತ್ಯ ಅಂದಾಜು ₹4.1 ಲಕ್ಷ ಹೆಚ್ಚುವರಿ ಮೊತ್ತವನ್ನು ಹಾಗೂ ಈ ಅವಧಿಗೆ ಒಟ್ಟು ಅಂದಾಜು ₹4 ಕೋಟಿ ವಿಶೇಷ ಪ್ರೋತ್ಸಾಹಧನವನ್ನು ರೈತರಿಗೆ ಪಾವತಿಸಲಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ತಿಳಿಸಿದ್ದಾರೆ.
ಉಭಯ ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿ ಹಸಿರು ಹುಲ್ಲು, ಒಣ ಹುಲ್ಲು ಕೊರತೆ ಇರುತ್ತದೆ. ರಸಮೇವು (ಸೈಲೇಜ್)ಗೆ ಅಧಿಕ ಬೆಲೆ ನೀಡಬೇಕಾಗುತ್ತದೆ. ಹೀಗಾಗಿ ಹೈನುಗಾರಿಕೆ ಮಾಡುತ್ತಿರುವವರಿಗೆ ನೆರವಾಗಲು ಈ ಯೋಜನೆ ಜಾರಿಗೊಳಿಸಲಾಗಿದೆ.
ಪ್ರತಿ ಲೀಟರ್ ಗುಣಮಟ್ಟದ ಹಾಲಿಗೆ ಪ್ರಸ್ತುತ ಒಕ್ಕೂಟವು ನೀಡುತ್ತಿರುವ ₹1.50 ಪ್ರೋತ್ಸಾಹಧನ ಸೇರಿ ₹40.76 ದರ ನೀಡಲಾಗುತ್ತಿದೆ. ಈಗ ಹೆಚ್ಚುವರಿ ₹1 ಪ್ರೋತ್ಸಾಹಧನ ಸೇರಿ ಗುಣಮಟ್ಟದ ಹಾಲಿಗೆ ₹41.76 ನೀಡಲಾಗುವುದು. ರೈತರು ಉತ್ತಮ ಗುಣಮಟ್ಟದ ಅಧಿಕ ಹಾಲನ್ನು ಉತ್ಪಾದಿಸಿ ಅದನ್ನು ಒಕ್ಕೂಟಕ್ಕೆ ನೀಡುವ ಮೂಲಕ ಪ್ರೋತ್ಸಾಹಧನ ಹೆಚ್ಚಳದ ಪ್ರಯೋಜನ ಪಡೆಯಬೇಕು ಎಂದು ಅವರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.