ಉಳ್ಳಾಲ (ದಕ್ಷಿಣ ಕನ್ನಡ): ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಟ್ರಾಲರ್ ಬೋಟ್ನ ಎಂಜಿನ್ ಸಮುದ್ರದಲ್ಲಿ ಕೆಟ್ಟುಹೋಗಿದ್ದು,. ಅಲೆಗಳ ನೆರವಿನಿಂದಾಗಿ ತೇಲುತ್ತಾ ಬಂದ ಬೋಟ್ ಉಳ್ಳಾಲದ ಸೀಗ್ರೌಂಡ್ ಬಳಿ ದಡಸೇರಿದೆ. ದೋಣಿಯಲ್ಲಿದ್ದ 13 ಮಂದಿ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ
ಕೆಟ್ಟು ಹೋಗಿರುವ 'ಬುರಾಕ್ ಟ್ರಾಲರ್ ಬೋಟ್' ಉಳ್ಳಾಲದ ಮುಕ್ಕಚ್ಚೇರಿ ನಿವಾಸಿ ಮೊಹಮ್ಮದ್ ಅಶ್ಫಾಕ್ ಎಂಬುವರದು. ಮಂಗಳೂರಿನ ಹಳೆ ಬಂದರು ಧಕ್ಕೆಯಿಂದ ಅರಬ್ಬಿ ಸಮುದ್ರದಲ್ಲಿ ಕೇರಳ ದತ್ತ ಭಾನುವಾರ ರಾತ್ರಿ ಆಳಸಮುದ್ರ ಮೀನುಗಾರಿಕೆಗೆ ಬೋಟ್ ತೆರಳಿತ್ತು. ಸಮುದ್ರದಲ್ಲಿ ಎಂಜಿನ್ ವೈಫಲ್ಯ ಉಂಟಾಗಿದ್ದರಿಂದ ಬೋಟ್ ಮುಂದೆ ಚಲಿಸಲು ಅಸಾಧ್ಯವಾಗಿತ್ತು. ಮಧ್ಯರಾತ್ರಿ ವೇಳೆ ಬೋಟ್ ಕೆಟ್ಟು ನಿಂತಿದ್ದು ಇತರ ಮೀನುಗಾರಿಕಾ ದೋಣಿಗಳಲ್ಲಿದ್ದವರ ಗಮನಕ್ಕೆ ಬಂದಿರಲಿಲ್ಲ. ಆ ದೋಣಿಯಲ್ಲಿದ್ದ 13 ಮೀನುಗಾರರು ಜೀವ ಕೈಯಲ್ಲಿಟ್ಟುಕೊಂಡು ಸಮುದ್ರದಲ್ಲೇ ಉಳಿದಿದ್ದರು. ಅಲೆಗಳಿಂದಾಗಿ ತೇಲುತ್ತಾ ಬಂದ ಬೋಟ್ ಇಂದು ನಸುಕಿನ ಜಾವ ಸೀಗ್ರೌಂಡ್ ಎಂಬಲ್ಲಿ ಸಮುದ್ರತೀರಕ್ಕೆ ಬಂದು ಅಪ್ಪಳಿಸಿದೆ.
ಘಟನೆಯಿಂದಾಗಿ ಬೋಟ್ ಹಾನಿಗೊಳಗಾಗಿದ್ದು, ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ. ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.