ADVERTISEMENT

ಕೇರಳ ವಿಮಾನ ದುರಂತದಲ್ಲಿ ಮಡಿದ ದೀಪಕ್‌ ಸಾಠೆ ಮಂಗಳೂರಿನಲ್ಲೂ ಸೇವೆ ಸಲ್ಲಿಸಿದ್ದ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 4:21 IST
Last Updated 10 ಆಗಸ್ಟ್ 2020, 4:21 IST
ದೀಪಕ್‌ ಸಾಠೆ
ದೀಪಕ್‌ ಸಾಠೆ   

ಮಂಗಳೂರು: ಕೋಯಿಕ್ಕೋಡ್‌ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟಿರುವ ಪೈಲಟ್‌ ಕ್ಯಾ.ದೀಪಕ್‌ ವಸಂತ ಸಾಠೆ ಅವರು 2015-16ರಲ್ಲಿ ಮಂಗಳೂರು ಏರ್‌ ಇಂಡಿಯಾ ಬೇಸ್‌ನಲ್ಲಿಯೂ ಪೈಲಟ್‌ ಆಗಿ 15 ತಿಂಗಳು ಸೇವೆ ಸಲ್ಲಿಸಿದ್ದರು.

ಆ ಅವಧಿಯಲ್ಲಿ ಅವರು ನಗರದ ಕದ್ರಿ ಪಾರ್ಕ್‌ ಬಳಿ ಫ್ಲ್ಯಾಟ್‌ ನಲ್ಲಿ ಪತ್ನಿ ಜತೆ ವಾಸವಾಗಿದ್ದರು. ಅವರಿಗೆ ನಗರದಲ್ಲೂ ಹಲವು ಮಂದಿ ಸ್ನೇಹಿತರು ಇದ್ದರು. ಸ್ನೇಹಮಯಿ ಹಾಗೂ ನಗುಮುಖದ ಸರಳ ವೃಕ್ತಿತ್ವದವರಾಗಿದ್ದು, ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದಾಗಲೂ ಎಲ್ಲರೊಂದಿಗೆ ಸ್ನೇಹದಿಂದ ಇದ್ದರು ಎಂದು ‘ನಾಗಿ’ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಸ್ಮರಿಸಿದ್ದಾರೆ.

ರಿಯಲ್‌ ಎಸ್ಟೇಟ್‌ ಉದ್ಯಮಿ ಲ್ಯಾನ್ಸ್‌ಲಾಟ್‌ ಸಲ್ದಾನ ಅವರು ವಸಂತ ಸಾಠೆಯವರ ಜತೆಗಿನ ಒಡನಾಟವನ್ನು ಸ್ಮರಿಸಿದ್ದು, ‘ಸಾಠೆಯವರು ದಕ್ಷ ಹಾಗೂ ಅನುಭವಿ ಪೈಲಟ್‌ ಆಗಿದ್ದರು. ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಅವರು ಅತ್ಯಂತ ಶಿಸ್ತಿನ ವ್ಯಕ್ತಿಯಾಗಿದ್ದರು’ ಎಂದಿದ್ದಾರೆ.

ADVERTISEMENT

‘ಸಾಠೆ ಅವರು ತಮ್ಮ ಜತೆ 1988-90ರ ಅವಧಿಯಲ್ಲಿ ವಾಯುಸೇನೆಯಲ್ಲಿ ಜತೆಯಾಗಿ ಕೆಲಸ ಮಾಡಿದ್ದರು’ ಎಂದು ವಾಯುಸೇನೆಯ ನಿವೃತ್ತ ವಿಂಗ್‌ ಕಮಾಂಡರ್‌ ಜಿ.ಬಿ. ಅತ್ರಿ ನೆನಪಿಸಿಕೊಳ್ಳುತ್ತಾರೆ. ‘ಅವರ ಸಮಯ ಪ್ರಜ್ಞೆ ಹಾಗೂ ಕೊನೆಯ ಕ್ಷಣದ ತೀರ್ಮಾನಗಳು ವಿಮಾನ ಬೆಂಕಿಗೆ ಆಹುತಿಯಾಗುವಂತಹ ದೊಡ್ಡ ದುರಂತದಿಂದ ಪಾರು ಮಾಡಿದೆ’ ಎಂದು ಅತ್ರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.