ಮಂಗಳೂರು: ಇಎಸ್ಐ ಯೋಜನೆಯ ವ್ಯಾಪ್ತಿಗೆ ಒಳಪಡುವ ನೌಕರರು ಹಾಗೂ ಉದ್ಯೋಗದಾತರಿಗೆ ಕೆಲವೊಂದು ಪರಿಹಾರ ಕ್ರಮಗಳನ್ನು ಘೋಷಿಸಲಾಗಿದೆ.
ಯೋಜನೆಯ ವ್ಯಾಪ್ತಿಗೆ ಒಳಪಡುವ ನೌಕರರಿಗೆ ರಾಜೀವ್ ಗಾಂಧಿ ಶ್ರಮಿಕ ಕಲ್ಯಾಣ ಯೋಜನೆ (ಆರ್ಜಿಎಸ್ಕೆವೈ) ಮತ್ತು ಅಟಲ್ ಭೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ (ಎಬಿವಿಕೆವೈ) ಯೋಜನೆಯಡಿ ಆದಾಯ ಭದ್ರತೆ ಒದಗಿಸಲಾಗುತ್ತಿದೆ. ಕೈಗಾರಿಕಾ ವಿವಾದ ಅಧಿನಿಯಮ 1947 ಅನ್ವಯ ಉದ್ಯೋಗಿಗಳಾಗಿದ್ದು, ಇಎಸ್ಐ ಕಾಯ್ದೆಗೊಳಪಟ್ಟಿರುವ ನೌಕರರು ಉದ್ಯೋಗರಹಿತರಾಗಿದ್ದಲ್ಲಿ ಅವರಿಗೆ ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತದೆ.
ಎಬಿವಿಕೆವೈ ಅಡಿಯಲ್ಲಿ ಸೌಲಭ್ಯ ಪಡೆಯಲು, ಇಎಸ್ಐ ಯೋಜನೆಯಡಿ ಬರುವ ನೌಕರರು ಇಎಸ್ಐಸಿಯ ಐಪಿ ಪೋರ್ಟಲ್ ಮೂಲಕ ತಮ್ಮ ಕ್ಲೈಮ್ ಅನ್ನು ಆನ್ಲೈನ್ ನಲ್ಲಿ ಸಲ್ಲಿಸಬಹುದು.
ಉದ್ಯೋಗದಾತರಿಗೆ ವಿನಾಯ್ತಿ: ಅಕ್ಟೋಬರ್ - 2019 ರಿಂದ ಮಾರ್ಚ್ -2020 ರವರೆಗಿನ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಇಎಸ್ಐ ವಂತಿಗೆಯನ್ನು ಮೇ 11 ರ ಬದಲು ಜೂನ್ 11 ರವರೆಗೆ ಸಲ್ಲಿಸಲು ಉದ್ಯೋಗದಾತರಿಗೆ ಅನುಮತಿ ನೀಡಲಾಗಿದೆ ಎಂದು ಇಎಸ್ಐ ಮಂಗಳೂರು ಕಚೇರಿಯ ಪ್ರಭಾರ ಉಪ ನಿರ್ದೇಶಕ ಎಸ್. ಸಿವರಾಮಕೃಷ್ಣನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.