ADVERTISEMENT

ಬಂಟ್ವಾಳ: ಮಗನನ್ನು ಕತ್ತಿಯಿಂದ ಕಡಿದು ತಂದೆ ಆತ್ಮಹತ್ಯೆಗೆ ಶರಣು

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 14:08 IST
Last Updated 23 ಜೂನ್ 2021, 14:08 IST
ವ್ಯಕ್ತಿ ಸಾವು–ಪ್ರಾತಿನಿಧಿಕ ಚಿತ್ರ
ವ್ಯಕ್ತಿ ಸಾವು–ಪ್ರಾತಿನಿಧಿಕ ಚಿತ್ರ   

ಬಂಟ್ವಾಳ: ಇಲ್ಲಿನ ಪುಂಜಾಲಕಟ್ಟೆಯಲ್ಲಿ ಬುಧವಾರ ತಂದೆ ತನ್ನ ಮಗನನ್ನೇ ಕತ್ತಿಯಿಂದ ಕಡಿದು ಹತ್ಯೆ ಮಾಡಿದ ಬಳಿಕ, ತಾನು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪುಂಜಾಲಕಟ್ಟೆ ಸರ್ಕಾರಿ ಆಸ್ಪತ್ರೆ ಸಮೀಪದ ಶ್ರೀರಾಮ ಭಜನಾ ಮಂದಿರದ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಬಾಬು ನಾಯ್ಕ (58), ಪುತ್ರ ಸಾತ್ವಿಕ್(15)ನನ್ನು ಕತ್ತಿಯಿಂದ ಕಡಿದು, ಮನೆಯ ಪಕಾಸಿಗೆ ನೇಣು ಹಾಕಿಕೊಂಡಿರುವುದು ಕಂಡು ಬಂದಿದೆ.

ಮದ್ಯಸೇವನೆಯ ಚಟ ಹೊಂದಿದ್ದ ಬಾಬು ನಾಯ್ಕ ಕೆಲ ದಿನಗಳಿಂದ ಮಗನೊಂದಿಗೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡುತ್ತಿದ್ದ. ಬುಧವಾರ ಮಧ್ಯಾಹ್ನವೂ ಮತ್ತೆ ಗಲಾಟೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಬಾಬು ನಾಯ್ಕನ ಪತ್ನಿ ಸುಗಂಧಿ ಫ್ಯಾಕ್ಟರಿಯೊಂದಕ್ಕೆ ಕೆಲಸಕ್ಕೆ ತೆರಳಿದ್ದರು. ಮಗನಿಗೆ ಫೋನ್ ಮಾಡಿದಾಗ ಆತ ಕರೆ ಸ್ವೀಕರಿಸದ ಕಾರಣ, ಸಂಶಯಗೊಂಡು ಅವರು ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಒಂದೆಡೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪುತ್ರ, ಇನ್ನೊಂದೆಡೆ ನೇಣು ಹಾಕಿಕೊಂಡ ಪತಿಯನ್ನು ಕಂಡು ಸುಗಂಧಿ ಬೆಚ್ಚಿ ಬಿದ್ದಿದ್ದಾರೆ ಎಂದು ಪುಂಜಾಲಕಟ್ಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ, ಎಸ್‌ಐ ಸೌಮ್ಯಾ ಜೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.