ಉಳ್ಳಾಲ: ವಿದ್ಯಾರ್ಥಿನಿಗೆ 12 ಬಾರಿ ಚೂರಿಯಿಂದ ಇರಿದ ಯುವಕ, ಬಳಿಕ ತಾನೂ ಕತ್ತು ಕೊಯ್ದು ಆತ್ಮಹತ್ಯೆಗೆಶುಕ್ರವಾರ ಸಂಜೆ ಯತ್ನಿಸಿದ್ದಾನೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬಗಂಬಿಲದಲ್ಲಿರುವ ವಿದ್ಯಾರ್ಥಿನಿ ಮನೆ ಸಮೀಪದಲ್ಲೇ ಸಂಭವಿಸಿದೆ.
ಖಾಸಗಿ ಕಾಲೇಜಿನ ಮೊದಲ ವರ್ಷದ ಎಂಬಿಎ ವಿದ್ಯಾರ್ಥಿನಿ ದೀಕ್ಷಾ (20) ಕೊಲೆಯತ್ನಕ್ಕೆ ಒಳಗಾದವರು. ಶಕ್ತಿನಗರ, ರಾಮಶಕ್ತಿ ಮಿಷನ್ ಸಮೀಪದ ಸುಶಾಂತ್ (28) ಕೊಲೆ ಯತ್ನದ ಆರೋಪಿ.
‘ಶುಕ್ರವಾರ ಕಾಲೇಜು ಮುಗಿಸಿ ಮನೆ ಕಡೆಗೆ ನಡೆದು ತೆರಳುತ್ತಿದ್ದ ಸಂದರ್ಭ ಹಿಂಬದಿಯಿಂದ ಸ್ಕೂಟರ್ನಲ್ಲಿ ಬಂದ ಸುಶಾಂತ್ , ದೀಕ್ಷಾಳನ್ನು ಅಡ್ಡಗಟ್ಟಿ ಚೂರಿಯಿಂದ ಇರಿದಿದ್ದಾನೆ. ಈ ವೇಳೆ ವಿದ್ಯಾರ್ಥಿನಿ ದೀಕ್ಷಾ ಬೊಬ್ಬೆ ಹಾಕಿದ್ದಳು. ಆಗ ಸಮೀಪದ ಆಸ್ಪತ್ರೆ ಸಿಬ್ಬಂದಿ ಹಾಗೂ ಸ್ಥಳೀಯರು ದಾಳಿಯನ್ನು ತಡೆಯಲು ಯತ್ನಿಸಿದಾಗ, ಸುಶಾಂತ್ ತನ್ನ ಕತ್ತನ್ನು ಚೂರಿಯಿಂದ ಇರಿಯುತ್ತಾ ಮತ್ತೆ ದೀಕ್ಷಾ ಮೇಲೆ ಚೂರಿಯಿಂದ ಇರಿದಿದ್ದಾನೆ. ಆತನೂ ರಸ್ತೆಗೆ ಉರುಳಿದ ನಂತರ ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ಮೂಲಕ ಇಬ್ಬರನ್ನು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆ ತೀವ್ರ ನಿಗಾ ಘಟಕಕ್ಕೆ ದಾಖಲಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಇಬ್ಬರ ಸ್ಥಿತಿಯೂ ಗಂಭೀರವಾಗಿದೆ’ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.
ಇಬ್ಬರೂ ಪರಿಚಿತರಾಗಿದ್ದು, ಜತೆಗಿರುವ ಫೋಟೊಗಳು ಫೇಸ್ಬುಕ್ನಲ್ಲಿ ಇವೆ. ಅಲೋಶಿಯಸ್ ಕಾಲೇಜಿನಲ್ಲಿ ಜತೆಯಾಗಿ ಕಲಿಯುವ ಸಂದರ್ಭ ಇಬ್ಬರಿಗೂ ಪರಿಚಯವಿತ್ತು.ಡ್ಯಾನ್ಸ್ ತರಬೇತಿದಾರನಾಗಿದ್ದ ಸುಶಾಂತ್ ಬಳಿ ದೀಕ್ಷಾ ಕೂಡಾ ತರಬೇತಿ ಪಡೆಯುತ್ತಿದ್ದಳು ಎಂದು ತಿಳಿದು ಬಂದಿದೆ.
ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.ಸ್ಥಳಕ್ಕೆ ಎಸಿಪಿ ರಾಮರಾವ್, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ, ಕೊಣಾಜೆ ಠಾಣಾಧಿಕಾರಿ ರವೀಶ್ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೃತ್ಯ ನಡೆಸದಂತೆ ಎಲ್ಲರೂ ಬೊಬ್ಬಿಟ್ಟಿದ್ದಾರೆ. ಅವರನ್ನು ಚೂರಿಯಿಂದ ಬೆದರಿಸಿಯೇ ಸುಶಾಂತ್ ದುಷ್ಕೃತ್ಯ ಎಸಗಿದ್ದನು ಈ ದೃಶ್ಯಾವಳಿಗಳ ವಿಡಿಯೊ ಇದೀಗ ವೈರಲ್ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.