ADVERTISEMENT

ರಂಗಕರ್ಮಿ ಐ.ಕೆ.ಬೊಳುವಾರುಗೆ ರಂಗ ಭಾಸ್ಕರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 12:14 IST
Last Updated 9 ಮಾರ್ಚ್ 2021, 12:14 IST
ಹಿರಿಯ ರಂಗಕರ್ಮಿ ಐ.ಕೆ.ಬೊಳುವಾರು
ಹಿರಿಯ ರಂಗಕರ್ಮಿ ಐ.ಕೆ.ಬೊಳುವಾರು   

ಮಂಗಳೂರು: ಪ್ರತಿಭಾವಂತ ರಂಗ ನಿರ್ದೇಶಕ ಭಾಸ್ಕರ ನೆಲ್ಲಿತೀರ್ಥ ನೆನಪಿನಲ್ಲಿ ಇಲ್ಲಿನ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡುವ ‘ರಂಗಭಾಸ್ಕರ-2021’ ಪ್ರಶಸ್ತಿಗೆ ಪುತ್ತೂರಿನ ಹಿರಿಯ ರಂಗಕರ್ಮಿ ಐ.ಕೆ.ಬೊಳುವಾರು ಅವರನ್ನು ಆಯ್ಕೆ ಮಾಡಲಾಗಿದೆ.

ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಹನ್ನೆರಡನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಾ.10ರಂದು ಸಂಜೆ 3ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

ಡಾ.ನಾ.ದಾಮೋದರ ಶೆಟ್ಟಿ, ಡಾ.ಮೀನಾಕ್ಷಿ ರಾಮಚಂದ್ರ ಮತ್ತು ಜಾದೂಗಾರ ಕುದ್ರೋಳಿ ಗಣೇಶ್ ಸಮಿತಿಯು ಪ್ರಶಸ್ತಿಗೆ ಆಯ್ಕೆ ಮಾಡಿದೆ.

ADVERTISEMENT

42 ವರ್ಷಗಳಿಂದ ರಂಗಭೂಮಿಗೆ ಸಂಬಂಧಿಸಿದಂತೆ ನಟನೆ, ನಿರ್ದೇಶನ, ನಾಟಕ ರಚನೆ, ನೇಪಥ್ಯ, ಪ್ರಕಟಣೆ, ತರಬೇತಿ, ಸಂಘಟನೆ ಮತ್ತಿತರ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿ, ಮಕ್ಕಳ ರಂಗಭೂಮಿಯಲ್ಲೂ ಐ.ಕೆ. ಬೊಳುವಾರು ಗಮನಾರ್ಹ ಕೆಲಸ ಮಾಡಿದ್ದಾರೆ. ಗ್ರಹಣ, ಡೋಲು, ಮುದುಕ ಸೆಟ್ಟಿಯೂ, ಮೂವರು ಮಕ್ಕಳೂ, ಮಾಯಾ ಕುದುರೆ ಮುಂತಾದ ನಾಟಕಗಳನ್ನು ಬರೆದಿದ್ದಾರೆ. ಚದುರಂಗ, ನಿರತ ನಿರಂತ ಮುಂತಾದ ರಂಗ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

ವೇಣುಮಿತ್ರ ಕಾಸರಗೋಡು, ವಿಟ್ಲ ಮಂಗೇಶ್ ಭಟ್, ರೋಹಿಣಿ ಜಗರಾಂ, ಜಗನ್ ಪವಾರ್ ಬೇಕಲ್, ಕಾಸರಗೋಡು ಚಿನ್ನಾ ಮತ್ತು ಯಕ್ಷಗುರು ಗಣೇಶ ಕೊಲೆಕಾಡಿ ಅವರಿಗೆ ಈ ಹಿಂದೆ ‘ರಂಗಭಾಸ್ಕರ’ ಗೌರವ ಸಂದಿತ್ತು.

ಕಾರ್ಯಕ್ರಮದ ಬಳಿಕ ‘ಮಿನುಗೆಲೆ ಮಿನುಗೆಲೆ ನಕ್ಷತ್ರ’ ಎಂಬ ಮಕ್ಕಳ ಮತ್ತು ‘ದಾಟ್ಸ ಆಲ್ ಯುವರ್ ಆನರ್’ ಎಂಬ ಕನ್ನಡ ನಾಟಕಗಳಿದ್ದು, ಪ್ರವೇಶ ಉಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.