ಸಾಂದರ್ಭಿಕ ಚಿತ್ರ
ಕಾಸರಗೋಡು: ‘ರೈಸಿಂಗ್ ಕಾಸರಗೋಡು’ ಹೆಸರಿನ ಹೂಡಿಕೆದಾರರ ಸಂಗಮ ಸಮಾರೋಪಗೊಂಡಿದ್ದು, ಜಿಲ್ಲೆಯಲ್ಲಿ ₹ 282 ಕೋಟಿ ಹೂಡಿಕೆ ನಡೆಯಲಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾ ಪಂಚಾಯಿತಿ, ಜಿಲ್ಲಾ ಉದ್ದಿಮೆ ಕೇಂದ್ರ ಮತ್ತು ಜಿಲ್ಲಾಡಳಿತ ವತಿಯಿಂದ ಹೂಡಿಕೆದಾರರ ಸಂಗಮ ಹಮ್ಮಿಕೊಳ್ಳಲಾಗಿತ್ತು. ಮೊದಲ ದಿನ ಸುಮಾರು 100 ಮಂದಿ ಹೂಡಿಕೆದಾರರು ಸಲ್ಲಿಸಿದ್ದ ಯೋಜನೆಗಳಲ್ಲಿ 22 ಯೋಜನೆಗಳನ್ನು ಆಯ್ಕೆ ಮಾಡಲಾಗಿದ್ದು, ಅನುಷ್ಠಾನಕ್ಕೆ ಜಿಲ್ಲಾ ಪಂಚಾಯಿತಿ ಬೆಂಬಲ ನೀಡಲಿದೆ.
₹ 300 ಕೋಟಿ ಅನಿವಾಸಿ ಭಾರತೀಯ ಟೌನ್ಷಿಪ್ ನಿರ್ಮಾಣ ಯೋಜನೆಯನ್ನು ಅನಿವಾಸಿ ಭಾರತೀಯ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆ ಸಲ್ಲಿಸಿದ್ದರೂ, ಇದರ ಸಾಧಕ-ಬಾಧಕಗಳನ್ನು ಡಿಪಿಆರ್ ಅಧ್ಯಯನ ನಡೆಸಿ ನಂತರ ತೀರ್ಮಾನ ಕೈಗೊಳ್ಳಲಿದೆ ಎಂದರು.
ಮುಂದಿನ ವರ್ಷ ನಡೆಯಲಿರುವ ಹೂಡಿಕೆದಾರರ ಸಂಗಮದಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಹೂಡಿಕೆಯ ನಿರೀಕ್ಷೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉದ್ದಿಮೆ ಕೇಂದ್ರ ಪ್ರಧಾನ ಪ್ರಬಂಧಕ ಕೆ.ಸಜಿತ್ ಕುಮಾರ್, ಆಡಳಿತ ಸಹಾಯಕ ಆದಿಲ್ ಅಹಮ್ಮದ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಷಾನವಾಝ್ ಪಾದೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.