ಮಂಗಳೂರು: ಉಳ್ಳಾಲ ಕಾಪಿಕಾಡ್ನ ಶ್ರೀ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ, ಎ.ಜಯಣ್ಣ ಸ್ಮರಣಾರ್ಥ ಆಯೋಜಿಸಿರುವ ಕಬಡ್ಡಿ ಟೂರ್ನಿಗಳು ಅಕ್ಟೋಬರ್ 8 ಮತ್ತು 9ರಂದು ನಗರದ ನೆಹರು ಮೈದಾನದಲ್ಲಿ ನಡೆಯಲಿವೆ.
8ರಂದು ದಕ್ಷಿಣ ಕನ್ನಡ ಜಿಲ್ಲಾ ಹೈಸ್ಕೂಲ್ ಬಾಲಕ ಮತ್ತು ಬಾಲಕಿಯರ ಟೂರ್ನಿ ನಡೆಯಲಿದ್ದು 9ರಂದು ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಪುರುಷರ ಟೂರ್ನಿ ಆಯೋಜಿಸಲಾಗಿದೆ ಎಂದು ಸಂಚಾಲಕ ಗೋಪಿನಾಥ್ ಕಾಪಿಕಾಡ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿತಿಳಿಸಿದರು.
ಹೈಸ್ಕೂಲ್ ವಿದ್ಯಾರ್ಥಿಗಳ ಟೂರ್ನಿಯ ಚಾಂಪಿಯನ್ ತಂಡಕ್ಕೆ ₹ 10 ಸಾವಿರ, ರನ್ನರ್ ಅಪ್ ತಂಡಕ್ಕೆ ₹ 7,000 ಮತ್ತು ಮೂರನೇ ಸ್ಥಾನ ಗಳಿಸಿದ ತಂಡಕ್ಕೆ ₹ 3 ಸಾವಿರ ನಗದು ನೀಡಲಾಗುವುದು. ಶಾಶ್ವತ ಫಲಕ ಮತ್ತು ವೈಯಕ್ತಿಕ ಬಹುಮಾನವೂ ಇದೆ. ಕಾಲೇಜು ವಿದ್ಯಾರ್ಥಿಗಳ ಟೂರ್ನಿಯ ವಿಜೇತರಿಗೆ ₹ 25 ಸಾವಿರ, ರನ್ನರ್ ಅಪ್ ತಂಡಕ್ಕೆ ₹ 15 ಸಾವಿರ ಮತ್ತು ಮೂರನೇ ಸ್ಥಾನ ಗಳಿಸಿದ ತಂಡಕ್ಕೆ ₹ 5 ಸಾವಿರ ಬಹುಮಾನ ಮೊತ್ತ ಸಿಗಲಿದೆ. ಶಾಶ್ವತ ಫಲಕ ಮತ್ತು ವೈಯಕ್ತಿಕ ಬಹುಮಾನವನ್ನೂ ನೀಡಲಾಗುವುದು ಎಂದು ಅವರು ವಿವರಿಸಿದರು.
2016ರಲ್ಲಿ ಆರಂಭವಾದ ಅಕಾಡೆಮಿ ಈ ವರೆಗೆ 7 ಟೂರ್ನಿಗಳನ್ನು ಆಯೋಜಿಸಿದ್ದು ಮಾಸ್ಟರ್ಸ್ ಕಬಡ್ಡಿ ಟೂರ್ನಿಯನ್ನೂ ಆಯೋಜಿಸಲಾಗಿದೆ. ಯುವ ಪ್ರತಿಭೆಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದ್ದು ಕಬಡ್ಡಿಪಟುಗಳಿಗೆ ಸಂಕಷ್ಟದಲ್ಲಿ ನೆರವಾಗಲು ಕ್ರೀಡಾರಕ್ಷಾ ನಿಧಿಯನ್ನು ಸ್ಥಾಪಿಸಲಾಗಿದೆ ಎಂದು ಅವರು ವಿವರಿಸಿದರು.
ಅಧ್ಯಕ್ಷ ಎ.ಜೆ.ಶೇಖರ್, ಉಪಾಧ್ಯಕ್ಷ ದಿನೇಶ್ ಅತ್ತಾವರ, ಪ್ರಧಾನ ಕಾರ್ಯದರ್ಶಿ ದಿನೇಶ್ ಕಳ್ಳಿಗೆ ಮತ್ತು ಸಂಘಟನಾ ಕಾರ್ಯದರ್ಶಿ ಗಣೇಶ್ ಕಾಪಿಕಾಡ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.