ADVERTISEMENT

ಮಂಗಳೂರು| ಕಾಂತಾರ ಸಿನಿಮಾದಿಂದ ದೈವ ನಿಂದನೆ ಆಗಿಲ್ಲ: ಅಜಿತ್‌ ಕುಮಾರ್‌ ರೈ ಮಾಲಾಡಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 5:20 IST
Last Updated 13 ಅಕ್ಟೋಬರ್ 2025, 5:20 IST
<div class="paragraphs"><p>ಪ್ರಜಾವಾಣಿ ಚಿತ್ರ</p></div>
   

ಪ್ರಜಾವಾಣಿ ಚಿತ್ರ

ಮಂಗಳೂರು: ‘ಕಾಂತಾರ ಸಿನಿಮಾದಲ್ಲಿ ದೈವ ನಿಂದನೆ ಇಲ್ಲ. ದೈವಾರಾಧನೆಯ ಬಗ್ಗೆ ಉತ್ತಮವಾಗಿ ತೋರಿಸಲಾದ  ಆ ಸಿನಿಮಾ ದೈವ ನಂಬಿಕೆ ವಿಚಾರದಲ್ಲಿ ಕ್ರಾಂತಿ ಮೂಡಿಸಿದೆ. ಜನರಲ್ಲಿ ದೈವದ ಬಗ್ಗೆ ನಂಬಿಕೆ ಹೆಚ್ಚಿಸಿದೆ’ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದರು.

ತುಳುನಾಡ ದೈವ ಪರಿಚಾರಕರ‌ ಕ್ಷೇಮಾಭಿವೃದ್ಧಿ ಟ್ರಸ್ಟ್ ಉದ್ಘಾಟನೆ ಸಲುವಾಗಿ ಇಲ್ಲಿ ಭಾನುವಾರ ಏರ್ಪಡಿಸಿದ್ದ 'ಕೊಡಿಯಡಿತ ನಿರೆಲ್’ ಕಾರ್ಯಕ್ರಮ ಉದ್ಘಾಟಿಸಿ, ಟ್ರಸ್ಟ್‌ನ ಲಾಂಛನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. 

ADVERTISEMENT

‘ನಮ್ಮ ಈಗಿನ ಪೀಳಿಗೆಯವರಲ್ಲಿ ದೈವಾರಾಧನೆ ಬಗ್ಗೆ ತಿಳಿವಳಿಕೆ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂತಾರ ಸಿನಿಮಾ ನೋಡಿದ ಅನೇಕರು ಮತ್ತೆ ದೈವವನ್ನು ಹುಡುಕಿಕೊಂಡು ಬಂದ ಉದಾಹರಣೆಗಳಿವೆ.  ಸಿನಿಮಾ ನೋಡಿದ ಕೆಲವರು ಅತಿರೇಕದಿಂದ ವರ್ತಿಸಿರುವುದು ದೈವಭಕ್ತರ ಮನಸ್ಸಿಗೆ ಘಾಸಿಯಾಗಿದೆ.  ಯಾರೂ ದೈವಾರಾಧನೆ ಕುರಿತ ನಂಬಿಕೆಯನ್ನು ಅಪಹಾಸ್ಯ  ಮಾಡಬಾರದು. ಅಪನಂಬಿಕೆ ಹುಟ್ಟಿಸಬಾರದು. ಈ ರೀತಿ  ಮಾಡಿದ್ದರಿಂದ ದೈವ ಸಣ್ಣದಾಗದು. ದೈವದ ಬಗ್ಗೆ ನಮ್ಮ ನಂಬಿಕೆ ಅಚಲವಾಗಿರಬೇಕು’ ಎಂದರು.  

ತೊಕ್ಕೊಟ್ಟಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿಭಾಗ ಮುಖ್ಯಸ್ಥ ಅರುಣ್ ಉಳ್ಳಾಲ್‌, ‘ಹತ್ತೂ ಊರಲ್ಲಿ ಹತ್ತು ಕಟ್ಟುಪಾಡುಗಳಿರುತ್ತವೆ.  ಕಟ್ಟು ಕಟ್ಟಳೆಗಳನ್ನು ಏಕಸೂತ್ರಕ್ಕೆ ತರುವುದು ಕಷ್ಟ. ಹಾಗಾಗಿ ತಮ್ಮ ಕಟ್ಟಳೆಯೇ ಶ್ರೇಷ್ಠ ಎಂದು ಸಾಧಿಸುವುದನ್ನು ಬಿಟ್ಟು, ವೃತ್ತಿ ಗೌರವ ಉಳಿಸಬೇಕು. ಎಲ್ಲ ದೈವ ಪರಿಚಾರಕರೂ ಭಿನ್ನಾಭಿಪ್ರಾಯ ಬದಿಗಿಟ್ಟು ಒಂದಾಗಬೇಕು’ ಎಂದರು. 

‘ದೈವಗಳ ಪರಿಚಾರಿಕರ ಕೆಲಸ ಹಿಂದೆಂದಿಗಿಂತಲೂ ಇಂದು ಕಷ್ಟ. ಸುತ್ತಲೂ ಕ್ಯಾಮೆರಾ ಕಣ್ಣುಗಳಿರುತ್ತವೆ. ದೈವ ಚಾಕರಿಯ ಬೇರೆ ಬೇರೆ ಕರ್ತವ್ಯ ಮಾಡುವ 16 ವರ್ಗ ಸೇರುವಾಗ ತುಂಬಾ ವಿಮರ್ಶೆಯ ಕಣ್ಣುಗಳಿರುತ್ತವೆ. ಇಂತಹ ಸಂಧಿಗ್ಧ ಸಮಯದಲ್ಲಿ ವಿಶ್ವಾಸಕ್ಕೆ ಪೆಟ್ಟು ಬೀಳದಂತೆ ಎಚ್ಚರ ವಹಿಸಬೇಕು’ ಎಂದರು.   

ಪಡುಪಣಂಬೂರಿನ ಸುವರ್ಣ ಮೂಲಸ್ಥಾನದ  ಸುಚ್ಚೀಂದ್ರ ಅಮೀನ್‌, ರಾಜ್ಯ ಅಸಂಘಟಿತ ಪುರೋಹಿತ– ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರಕಾಶ್ ವಿ. ಹೊಳ್ಳ, ಕುಳಾಯಿಗುತ್ತು ಗಡಿಕಾರ ಪಟೇಲ್ ಶಂಕರ ರೈ, ಮಲರಾಯಸ್ಥಾನದ ಪಿ.ಕೆ.ಬೂಬ ಪೂಜಾರಿ, ಗಂಧಕಾಡುವಿನ ಪಂಬದ ಯಾನೆ ದೈವಾಧಿಗಾರ ಸಂಘದ ಅಧ್ಯಕ್ಷ  ಪುರುಷೋತ್ತಮ್ ಗೋಳಿಪಲ್ಕೆ, ಬ್ರಹ್ಮಶ್ರೀ ನಾರಾಯಣಗುರು ವೈದಿಕ ಸಮಿತಿಯ ಹರೀಶ್‌ ಶಾಂತಿ ಪುತ್ತೂರು, ಉದ್ಯಮಿ ಲಾಂಚುಲಾಲ್ ಕೆ‌.ಎಸ್, ಶಾಸಕ ಡಿ.ವೇದವ್ಯಾಸ ಕಾಮತ್, ಪಮ್ಮಿ ಮಂಗಳೂರು, ಕದ್ರಿ ಅರ್ಚಕ  ಕೃಷ್ಣ ಅಡಿಗ ಮತ್ತಿತರರು ಭಾಗವಹಿಸಿದ್ದರು.  

ಟ್ರಸ್ಟ್ ನ ಅಧ್ಯಕ್ಷ ಲಕ್ಷ್ಮೀನಾರಾಯಣ ಎಂ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ದೀಪಕ್ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.  

ದೈವ ಪರಿಚಾರಕರಿಗೆ ಸನ್ಮಾನ

ದೈವ ಪರಿಚಾರಕ ವೃತ್ತಿಯಲ್ಲಿ ತೊಡಗಿರುವ ಪಟೇಲ್ ಶಂಕರ ರೈ,  ಸುಂದರ ಶೇರಿಗಾರ,  ದಾಮು ಬಂಗೇರ ಹೊಸಬೆಟ್ಟು, ಸಂಜೀವ ಕೋಟ್ಯಾನ್ ಪಾಂಡೇಶ್ವರ,  ಗೋಪಾಲ ಪೂಜಾರಿ ಮಲಬೂರು.ಸುಬ್ಬ ಕೆ. ಉರ್ವ,  ಸುಂದರ‌  ಮುಕ್ಕ, ಕಮಲಾಕ್ಷ,  ಮಂಜುನಾಥ ಬಂಗೇರ, ವೀರಪ್ಪ ಮಡಿವಾಳ ಹಾಗೂ ಸೋಮನಾಥ ಮೂಲ್ಯ ಅವರನ್ನು ಸನ್ಮಾನಿಸಲಾಯಿತು. ಶ್ರುತನ್ ಬಿ.ಶೆಟ್ಟಿ ಸಾಧಕರನ್ನು ಪರಿಚಯಿಸಿದರು.