ಮೂಡುಬಿದಿರೆ (ದಕ್ಷಿಣ ಕನ್ನಡ): ಇಲ್ಲಿಗೆ ಸಮೀಪದ ಪುತ್ತಿಗೆ ಎರುಗುಂಡಿ ಜಲಪಾತ ವೀಕ್ಷಿಸಲು ತೆರಳಿದ್ದ ಪ್ರವಾಸಿಗರ ತಂಡವೊಂಡು ಭಾರಿ ಮಳೆಯಿಂದಾಗಿ ಉಕ್ಕಿ ಹರಿದ ಹಳ್ಳದ ನಡುವಿನ ಬಂಡೆಯಲ್ಲಿ ಸೋಮವಾರ ಸಿಲುಕಿತ್ತು. ತಂಡದಲ್ಲಿದ್ದ ಮಂಗಳೂರಿನ ಆರು ಪ್ರವಾಸಿಗರನ್ನು ಸ್ಥಳೀಯರು ರಕ್ಷಣೆ ಮಾಡಿದರು.
ಎರುಗುಂಡಿ ಜಲಪಾತದ ಬಳಿಯ ಹಳ್ಳದಲ್ಲಿ ಮಳೆಯ ನೀರು ತುಂಬಿ ಹರಿಯುತ್ತಿತ್ತು. ಅಪಾಯವನ್ನು ನಿರ್ಲಕ್ಷಿಸಿ ಯುವಕರು ಜಲಪಾತಕ್ಕೆ ಇಳಿದಿದ್ದರು. ಈ ವೇಳೆ ನೀರಿನ ಹರಿವು ಏಕಾಏಕಿ ಏರಿಕೆಯಾಗಿತ್ತು. ಯುವಕರು ಹಳ್ಳದ ನಡುವಿನ ಬಂಡೆಯಲ್ಲಿ ಸಿಲುಕಿದ್ದರು. ನೀರಿನ ರಭಸ ಹೆಚ್ಚಿದ್ದರಿಂದ ಅವರು ದಡಕ್ಕೆ ತಲುಪಲಾಗದೇ ಜೀವ ರಕ್ಷಣೆಗಾಗಿ ಕಿರುಚಲಾರಂಭಿಸಿದ್ದರು. ಅವರ ಕಿರುಚಾಟ ಕೇಳಿ ಹತ್ತಿರದಲ್ಲಿ ಮೀನು ಹಿಡಿಯುತ್ತಿದ್ದ ಸ್ಥಳೀಯರು ಅಲ್ಲಿಗೆ ಧಾವಿಸಿ ಹಗ್ಗದ ಸಹಾಯದಿಂದ ಯುವಕರನ್ನು ರಕ್ಷಣೆ ಮಾಡಿದರು. ಈ ಘಟನೆಯ ನಂತರ ಪುತ್ತಿಗೆ ಗ್ರಾಮ ಪಂಚಾಯತಿಯು ಎರುಗುಂಡಿ ಜಲಪಾತಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದೆ. ಈ ಸ್ಥಳದಲ್ಲಿ ಈ ಕುರಿತು ಎಚ್ಚರಿಕೆ ನೀಡುವ ಬ್ಯಾನರ್ ಅಳವಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.