ADVERTISEMENT

ಡಿ.ಎಂ ಅಧಿಸೂಚನೆ: ಕೆಎಸ್ಆರ್‌ಟಿಸಿ ಬಸ್‌ಗಳಿಗೆ ವಿನಾಯಿತಿ

ಸ್ಟೇಟ್‌ಬ್ಯಾಂಕ್‌ ಪ್ರದೇಶದಿಂದ ಕಾರ್ಯಾಚರಣೆಗೆ ಇದ್ದ ಅಡ್ಡಿ ನಿವಾರಣೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 7:10 IST
Last Updated 10 ಫೆಬ್ರುವರಿ 2026, 7:10 IST
ಕೆಎಸ್‌ಆರ್‌ಟಿಸಿ ಬಸ್‌ಗಳು
ಕೆಎಸ್‌ಆರ್‌ಟಿಸಿ ಬಸ್‌ಗಳು   

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್‌ಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ 1991ರ ಜ.5ರಂದು  ಹಾಗೂ 1993 ರ ಏ 6ರಂದು ಹೊರಡಿಸಿದ್ದ ಅಧಿಸೂಚನೆಯ ನಿಬಂಧನೆಗಳಿಂದ ವಿನಾಯಿತಿ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ಅವರು ಈ ಕುರಿತು ಆದೇಶ ಮಾಡಿದ್ದು, ಸ್ಟೇಟ್‌ಬ್ಯಾಂಕ್‌ನಿಂದ ನೇರವಾಗಿ ಜಿಲ್ಲೆಯ ವಿವಿಧ ಕಡೆಗಳಿಗೆ ಹಾಗೂ ಹೊರ ಜಿಲ್ಲೆಗಳಿಗೆ ಬಸ್‌ ಸೇವೆ ಆರಂಭಿಸುವುದಕ್ಕೆ ಇದ್ದ ಅಡ್ಡಿ ಇದರಿಂದಾಗಿ ನಿವಾರಣೆ ಆದಂತಾಗಿದೆ. 

‘ಮಂಗಳೂರು ನಗರದ ಕೇಂದ್ರ ಭಾಗದಲ್ಲಿ ಸಾರ್ವಜನಿಕ ಸಮೂಹ ಸಾರಿಗೆ ಉತ್ತೇಜಿಸಲು ಮತ್ತು ವೈಯಕ್ತಿಕ ವಾಹನಗಳ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೆಎಸ್ಆರ್‌ಟಿಸಿಯ ಎಲ್ಲಾ ವಾಹನಗಳಿಗೆ ಡಿ.ಎಂ. ಅಧಿಸೂಚನೆಯಿಂದ ವಿನಾಯಿತಿ ನೀಡಲಾಗಿದೆ. ನಗರದ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ, ಶಕ್ತಿ ಯೋಜನೆಯ ಪ್ರಯೋಜನ ಪಡೆಯಲು ಬಯಸುವ ಮಹಿಳಾ ಪ್ರಯಾಣಿಕರಿಗೆ, ಸಾರ್ವಜನಿಕ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಇದರಿಂದ ಅನುಕೂಲವಾಗಲಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದಲೂ ಇದು ಪ್ರಯೋಜನಕಾರಿ’ ಎಂದು ಜಿಲ್ಲಾಧಿಕಾರಿ ಅವರು ಆದೇಶದಲ್ಲಿ ತಿಳಿಸಿದ್ದಾರೆ. 

ADVERTISEMENT

ವಿನಾಯಿತಿಯಿಂದ ಪ್ರಯೋಜನಗಳೇನು?: ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಸ್ಟೇಟ್‌ಬ್ಯಾಂಕ್‌, ಮಂಗಳಾದೇವಿ, ಕೇಂದ್ರ ರೈಲು ನಿಲ್ದಾಣ, ಹಳೆಬಂದರು  ಮೊದಲಾದ ಪ್ರದೇಶಗಳಿಗೆ ಹೊಸ ಬಸ್‌ ಸೇವೆ ಆರಂಭಿಸಲು ಡಿ.ಎಂ. ಅಧಿಸೂಚನೆಯಡಿ ನಿರ್ಬಂಧವಿತ್ತು. ಹಾಗಾಗಿ ಕೆಎಸ್‌ಆರ್‌ಟಿಸಿ ಹೊಸ ಸೇವೆಗಳನ್ನು ಆರಂಭಿಸುವಾಗ ಅನಿವಾರ್ಯವಾಗಿ ಪಂಪ್‌ವೆಲ್– ಬಲ್ಮಠ–ಬಂಟ್ಸ್‌ ಹಾಸ್ಟೆಲ್–ಪಿವಿಎಸ್‌–ಲಾಲ್‌ಬಾಗ್– ಕೆಎಸ್‌ಆರ್‌ಟಿಸಿ ಮಾರ್ಗವನ್ನು ಅನುಸರಿಸಬೇಕಾಗಿತ್ತು. ಉಡುಪಿ ಕಡೆಯಿಂದ ಬರುವ ಬಸ್‌ಗಳು ಕೊಟ್ಟಾರಚೌಕಿಯಿಂದ ಲೇಡಿಹಿಲ್‌–ಲಾಲ್‌ಬಾಗ್‌– ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಕ್ಕೆ ತಲುಪಬೇಕಿತ್ತು. 

‘ಸ್ಟೇಟ್‌ಬ್ಯಾಂಕ್‌ ಸಂಪರ್ಕಿಸುವ ಮಾರ್ಗಗಳಿಗೆ ಸಾಮಾನ್ಯವಾಗಿ ಬೇಡಿಕೆ ಹೆಚ್ಚು. ಪ್ರಯಾಣಿಕರಿಗೂ ಈ ಮಾರ್ಗದಿಂದ ಅನುಕೂಲ ಜಾಸ್ತಿ. ಸ್ಟೇಟ್‌ಬ್ಯಾಂಕ್‌, ಮಂಗಳಾದೇವಿ, ವೆಲೆನ್ಸಿಯಾ, ಫಳ್ನೀರ್‌ ಮಾರ್ಗಗಳಲ್ಲಿ ಬಸ್‌ ಸಂಪರ್ಕ ಕಲ್ಪಿಸಲು ಇದ್ದ ನಿರ್ಬಂಧ ಈಗ ತೆರವಾದಂತಾಗಿದೆ. ನಾವು ಇನ್ನು ಹೊಸತಾಗಿ ಆರಂಭಿಸುವ ಬಸ್‌ಗಳು ಈ ಮಾರ್ಗಗಳಲ್ಲೂ ಸಂಚರಿಸುವುದಕ್ಕೆ ಅವಕಾಶ ಸಿಗಲಿದೆ’ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕಾಸರಗೋಡು, ಉಡುಪಿ ಮತ್ತಿತರ ಹೊರ ಜಿಲ್ಲೆಗಳಿಗೆ 1991ರ ಬಳಿಕ ಕೆಎಸ್‌ಆರ್‌ಟಿಸಿ ಹೊಸ ಬಸ್ ಸೇವೆ ಆರಂಭಿಸಿದಾಗ ಸ್ಟೇಟ್‌ ಬ್ಯಾಂಕ್ ಪ್ರದೇಶಕ್ಕೆ ಸಂಚಾರ ನಿರ್ಬಂಧ ಇತ್ತು. ಅದು ತೆರವಾಗಿದೆ. ಇನ್ನೂ ಈ ಬಸ್‌ಗಳನ್ನು ಸ್ಟೇಟ್‌ಬ್ಯಾಂಕ್‌ನಿಂದ ಆರಂಭಿಸಲು ಅವಕಾಶ ಸಿಗಲಿದೆ’ ಎಂದರು.

‘ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಡಿ.ಎಂ. ಅಧಿಸೂಚನೆಯ ನಿರ್ಬಂಧದಿಂದ ವಿನಾಯಿತಿ ಸಿಕ್ಕರೂ ತಕ್ಷಣವೇ ಎಲ್ಲ ಬಸ್‌ಗಳ ಸೇವೆಯನ್ನು ಸ್ಟೇಟ್‌ಬ್ಯಾಂಕ್‌ನಿಂದ ಆರಂಭಿಸುವುದಿಲ್ಲ. ಹೊಸ ಬಸ್‌ ಸೇವೆಗಳನ್ನು ಆರಂಭಿಸುವಾಗ ಆದಷ್ಟು ಹೆಚ್ಚು ಬಸ್‌ಗಳು ಸ್ಟೇಟ್‌ ಬ್ಯಾಂಕ್‌ ತಲುಪುವಂತೆ ಯೋಜನೆ ರೂಪಿಸುತ್ತೇವೆ.  ಸುರತ್ಕಲ್‌– ತಲಪಾಡಿ, ಸುರತ್ಕಲ್‌– ಫರಂಗಿಪೇಟೆ ಮುಂತಾದ ಹೊಸ ಮಾರ್ಗಗಳಲ್ಲೂ ಬಸ್‌ ಸೇವೆ ಆರಂಭಿಸಲಿದ್ದೇವೆ’ ಎಂದು ಅವರು ತಿಳಿಸಿದರು. 

‘2019ರ ಬಳಿಕ ರಾಜ್ಯ ಸರ್ಕಾರ  ಖಾಸಗಿಯವರಿಗೆ ಸ್ಟೇಜ್ ಕ್ಯಾರಿಯೇಜ್ ಪರವಾನಗಿ ನೀಡುತ್ತಿಲ್ಲ. ಕೆಎಸ್‌ಆರ್‌ಟಿಸಿಗೆ ಮಾತ್ರ ಈ ಅವಕಾಶ ಇದೆ. ಹಾಗಾಗಿ ಭವಿಷ್ಯದಲ್ಲಿ ಕೆಎಸ್‌ಆರ್‌ಟಿಸಿ ಕಾರ್ಯಾಚರಣೆ ವಿಸ್ತರಣೆ ದೃಷ್ಟಿಯಿಂದಲೂ ಈ ವಿನಾಯಿತಿಯು ಬಹಳ ಪ್ರಯೊಜನಕಾರಿ’ ಎಂದು ಅವರು ಅಭಿಪ್ರಾಯಪಟ್ಟರು.   

‘ಪಿಎಂ ಇ–ಬಸ್‌ ಯೋಜನೆ ಜಾರಿಗೆ ಅನುಕೂಲ‘

‘ಪಿ.ಎಂ ಇ ಬಸ್ ಯೋಜನೆಯಡಿ ಮಂಗಳೂರು ಕೆಸ್‌ಎಸ್‌ಆರ್‌ಟಿಸಿ ವಿಭಾಗಕ್ಕೆ 100 ಇ ಬಸ್‌ಗಳು ಮಂಜೂರಾಗಿವೆ. ರಾಜ್ಯ ಸರ್ಕಾರದಿಂದಲೂ 45 ಬಸ್‌ಗಳನ್ನು ಒದಗಿಸುವ ಪ್ರಸ್ತಾವ ಇದೆ. ಈ ಹೊಸ ಬಸ್‌ಗಳಿಗೆ ಮಾರ್ಗ ಹೊಂದಿಸಲು ಡಿ.ಎಂ ಅಧಿಸೂಚನೆಯಿಂದಾಗಿ ಸಮಸ್ಯೆ ಎದುರಾಗಿತ್ತು. ಅದೀಗ ನಿವಾರಣೆ ಆಗಲಿದೆ. ನಾವು ಹೆಚ್ಚು ಮುಕ್ತವಾಗಿ ಹೊಸ ಮಾರ್ಗಗಳನ್ನು ರೂಪಿಸಬಹುದು’ ಎಂದು ರಾಜೇಶ್‌ ಶೆಟ್ಟಿ ತಿಳಿಸಿದರು.  ‘ಈ ಹಿಂದೆ ಸ್ಟೇಟ್‌ಬ್ಯಾಂಕ್‌ವರೆಗೆ ಬಸ್ ಹೋಗದ ಕಾರಣಕ್ಕೆ  ಕೆಎಸ್‌ಆರ್‌ಟಿಸಿಯ ಕೆಲ ಮಾರ್ಗಗಳ ಕಾರ್ಯಾಚರಣೆ ನಷ್ಟಕ್ಕೆ ಸಿಲುಕಿತ್ತು. ಇನ್ನು ಅಂತಹ ಪ್ರಮೇಯ ಇರುವುದಿಲ್ಲ’ ಎಂದರು. 

ಡಿ.ಎಂ. ಅಧಿಸೂಚನೆಯ ನಿಬಂಧನೆಗಳಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ವಿನಾಯಿತಿ ನೀಡಿರುವುದು ಸ್ವಾಗತಾರ್ಹ. ಇನ್ನು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮುಕ್ತವಾಗಿ ಮಾರ್ಗಗಳನ್ನು ಹೊಂದಿಸಬಹುದು
-ರಾಜೇಶ್‌ ಶೆಟ್ಟಿ, ವಿಭಾಗೀಯ ನಿಯಂತ್ರಣಾಧಿಕಾರಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.