ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಶ್ರೀಕೃಷ್ಣಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವವನ್ನು ಸಂಪ್ರದಾಯದಂತೆ ಅಷ್ಟಮಿಯ ಸೋಮವಾರ ಸಂಜೆ ಆಚರಿಸಲಾಯಿತು. ಪುರೋಹಿತ ಸನತ್ ನೂರಿತ್ತಾಯ ಅವರು ವೈದಿಕ ವಿಧಿ– ವಿಧಾನ ನೆರವೇರಿಸಿದರು.
ಕಾಶಿಕಟ್ಟೆಯಲ್ಲಿ ಅಷ್ಟಮಿಯಂದು ಪೂಜಿತವಾದ ಕೃಷ್ಣನ ವಿಗ್ರಹವನ್ನು ಸ್ಥಳೀಯ ಮೂಲನಿವಾಸಿಗಳಾದ ಮಲೆಕುಡಿಯ ಜನಾಂಗದವರು ಪಾಲಕಿಯಲ್ಲಿ ಆನೆ, ಬಿರುದಾವಳಿ, ಮಂಗಳವಾದ್ಯದ ಮೂಲಕ ಮೆರವಣಿಗೆಯಲ್ಲಿ ದೇವಳಕ್ಕೆ ತಂದರು.
ಬಳಿಕ ದೇವಳಕ್ಕೆ ಪ್ರದಕ್ಷಿಣೆ ಮಾಡಿಸಿ ದೇವಳದಿಂದ ಕಾಶಿಕಟ್ಟೆಗೆ ಉತ್ಸವ ತೆರಳಿತು.
ಈ ನಡುವೆ ರಥಬೀದಿಯಿಂದ ಕಾಶಿಕಟ್ಟೆವರೆಗೆ ಅಲ್ಲಲ್ಲಿ ಕಂಬದಲ್ಲಿ ಕಟ್ಟಿದ್ದ ಮೊಸರು ತುಂಬಿದ ಕುಡಿಕೆಗಳನ್ನು ಮಹಿಳೆಯರು ಒಡೆದು ಜನ್ಮಾಷ್ಟಮಿ ಆಚರಿಸಿದರು. ಕಾಶಿಕಟ್ಟೆಯಲ್ಲಿ ಇರಿಸಿದ್ದ ಮೊಸರಿನ ಗಡಿಗೆಗಳನ್ನು ಒಡೆಯಲಾಯಿತು. ಬಳಿಕ ಕಾಶಿಕಟ್ಟೆಯಲ್ಲಿ ಭಗವಾನ್ ಶ್ರೀಕೃಷ್ಣನಿಗೆ ಮಹಾಪೂಜೆ ನಡೆಸಿ ಪ್ರಸಾದ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.