ಯಕ್ಷಗಾನ
ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ಈ ಬಾರಿ ಹೊಸ ಮೇಳ ತಿರುಗಾಟಕ್ಕೆ ಸಜ್ಜಾಗಿದೆ. ತೆಂಕುತಿಟ್ಟಿನ ಬಯಲಾಟ ಮೇಳಗಳೊಂದಿಗೆ ಕುಕ್ಕೆ ಕ್ಷೇತ್ರದ ಕಾಲಮಿತಿ ಮೇಳವು ಯಕ್ಷಪ್ರಿಯರಿಗೆ ಮುದ ನೀಡಲಿದೆ.
35 ವರ್ಷಗಳ ನಂತೆ ಕುಕ್ಕೆ ಕ್ಷೇತ್ರದ ಮೇಳ ಮತ್ತೆ ತಿರುಗಾಟ ನಡೆಸಲಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಹೆಸರಿನಲ್ಲಿ ತಿರುಗಾಟ ಪ್ರಾರಂಭಿಸಲಿರುವ ಮೇಳವು, ಸ್ಥಳ ಪುರಾಣದ ಕಥಾಹಂದರ ಹೊಂದಿರುವ ‘ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಮಹಾತ್ಮೆ’ ಹಾಗೂ ಸಿ. ರಾಘವೇಂದ್ರ ಕುಂಬ್ಳೆ ವಿರಚಿತ ‘ಸರ್ಪ ಸಂಪತ್ತ್’ ಎಂಬ ಎರಡು ಹೊಸ ಪ್ರಸಂಗಗಳೊಂದಿಗೆ ಪರಂಗ ಪ್ರದರ್ಶನಕ್ಕೆ ಸಿದ್ಧವಾಗಿದೆ.
ಹಿಮ್ಮೇಳ ಹಾಗೂ ಮುಮ್ಮೇಳ ಸೇರಿ ಸುಮಾರು 32 ಕಲಾವಿದರು ಇದ್ದಾರೆ. ಬಪ್ಪನಾಡು ಮೇಳ, ಬೆಂಕಿನಾಥೇಶ್ವರ ಮೇಳೆ ಸೇರಿ, ಬೇರೆ ಬೇರೆ ತಿರುಗಾಟ ಮೇಳಗಳಲ್ಲಿದ್ದ ಕಲಾವಿದರು ಕುಕ್ಕೆ ಮೇಳಕ್ಕೆ ಸೇರ್ಪಡೆಗೊಂಡಿದ್ದಾರೆ.
‘ಡಿಸೆಂಬರ್ 5ರಂದು ಕುಕ್ಕೆ ಕ್ಷೇತ್ರದಲ್ಲಿ ಮೊದಲ ಯಕ್ಷಗಾನ ಪ್ರದರ್ಶನ ನೀಡಿ, ನಂತರ ಮೇಳವು ತಿರುಗಾಟಕ್ಕೆ ಮುನ್ನುಡಿ ಬರೆಯಲಿದೆ. ಈಗಾಗಲೇ ಭಕ್ತರು 50ಕ್ಕೂ ಹೆಚ್ಚು ಆಟಗಳು ಮುಂಗಡ ಕಾಯ್ದಿರಿಸಿದ್ದಾರೆ. ಎರಡು ಪ್ರಸಂಗಗಳನ್ನು ಆಯ್ದುಕೊಳ್ಳಲಾಗಿದ್ದು, ಆಟ ಆಡಿಸುವವರಿಂದ ಬೇಡಿಕೆ ಬಂದಲ್ಲಿ ಯಾವುದೇ ಪೌರಾಣಿಕ ಪ್ರದರ್ಶನ ನೀಡಲು ಕಲಾವಿದರು ಸಮರ್ಥರಿದ್ದಾರೆ’ ಎಂದು ಮೇಳದ ಸಂಚಾಲಕ ಎಸ್.ಎ.ವರ್ಕಾಡಿ ತಿಳಿಸಿದರು.
‘ಆದಿಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ನಾಟಕಸಭಾ ಸುಬ್ರಹ್ಮಣ್ಯ ಎಂಬ ಹೆಸರಿನ ಬಯಲಾಟ ಮೇಳವು 1990ರವರೆಗೆ ತಿರುಗಾಟ ನಡೆಸಿತ್ತು. ಪುತ್ತೂರು ಬನ್ನೂರಿನ ಶೀನಪ್ಪ ಭಂಡಾರಿ ಇದನ್ನು ಮುನ್ನಡೆಸುತ್ತಿದ್ದರು. ಅವರಿಗೆ ವಯಸ್ಸಾದ ನಂತರ ಮೇಳದ ತಿರುಗಾಟ ನಿಂತಿತ್ತು. ಆ ಮೇಳದಲ್ಲಿ ಎಂಟು ವರ್ಷ ತಿರುಗಾಟ ಮಾಡಿದ ಭಾವನಾತ್ಮಕ ನಂಟು, ಮತ್ತೊಮ್ಮೆ ಮೇಳ ಪ್ರಾರಂಭಿಸಲು ಪ್ರೇರಣೆ ನೀಡಿತು. ದೇವರ ಅನುಗ್ರಹ, ಆಡಳಿತ ಮಂಡಳಿ ಒಪ್ಪಿಗೆಯೊಂದಿಗೆ ಹೊಸ ಹೆಸರಿನಲ್ಲಿ ಈ ಬಾರಿ ಮೇಳ ಹೊರಡಲಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಶಿವರಾಂ ರೈ ಸುಬ್ರಹ್ಮಣ್ಯ ಮೇಳದ ವ್ಯವಸ್ಥಾಪಕರಾಗಿದ್ದು, ಮಹೇಶ್ ಮುಳಿಯಾರು ಪ್ರಬಂಧಕರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.