ಉಜಿರೆ: ಧರ್ಮಸ್ಥಳದಲ್ಲಿ ಶನಿವಾರ ಲಕ್ಷ ದೀಪೋತ್ಸವ ನಡೆಯಲಿದ್ದು, ಸಿದ್ಧತೆ ಭರದಿಂದ ಸಾಗಿದೆ.
ರೈತರು ಹೂವು, ಹಣ್ಣು, ಅಕ್ಕಿ, ತರಕಾರಿ ಹಾಗೂ ದವಸಧಾನ್ಯಗಳನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ. ಬೆಂಗಳೂರು ಮಾರುಕಟ್ಟೆ ಹೂವಿನ ವ್ಯಾಪಾರಸ್ಥರ ಸಂಘದ ಶಿವಕುಮಾರ್ ನೇತೃತ್ವದಲ್ಲಿ ವಿವಿಧ ಹೂವು, ಹಣ್ಣು, ತರಕಾರಿಗಳನ್ನು ಬಳಸಿ ದೇವಸ್ಥಾನ, ಬೀಡು (ಹೆಗ್ಗಡೆಯವರ ನಿವಾಸ) ಅನ್ನಪೂರ್ಣ, ಕಾರ್ಯಾಲಯಗಳನ್ನು ಆಕರ್ಷಕವಾಗಿ ಅಲಂಕರಿಸಲಾಗಿದೆ. ಇದಕ್ಕಾಗಿ ತಲಾ 300 ಕೆ.ಜಿ.ಯಷ್ಟು ಅನಾನಸು, ಸೇಬು, ದ್ರಾಕ್ಷಿ, ಕಬ್ಬು, ತೆಂಗಿನಕಾಯಿ, ಕಲ್ಲಂಗಡಿ ಬಳಸಲಾಗಿದೆ.
ಲಿಲಿಯಂ, ಬಿಒಪಿ ಆರ್ಕಿಡ್, ಗುಲಾಬಿ, ಗ್ಲಾಡಿಯೊ, ಕ್ಯೂಬ್ರೋಸ್ ಮೊದಲಾದ ಹೂವುಗಳನ್ನು ಬಳಸಲಾಗಿದೆ ಎಂದು ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸುಮಾರು ಮುನ್ನೂರು ಜನರು ಅಲಂಕಾರ ಸೇವೆಯಲ್ಲಿ ನಿರತರಾಗಿದ್ದು, ಲಕ್ಷದೀಪೋತ್ಸವಕ್ಕಾಗಿ ನಮ್ಮ ಉಚಿತ ಸೇವೆ ಎಂದು ಶಿವಕುಮಾರ್ ತಿಳಿಸಿದ್ದು, ಅಂದಾಜು ₹ 1– ಲಕ್ಷ ವೆಚ್ಚವಾಗಬಹುದು ಎಂದು ತಿಳಿಸಿದ್ದಾರೆ.
ಸಮವಸರಣಪೂಜೆ ನಾಳೆ: ಡಿ.1ರಂದು ಸಂಜೆ 6.30ರಿಂದ ಭಗವಾನ್ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಸಮವಸರಣ ಪೂಜಾ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ನವೀನ್ ಜಾಂಬಳೆ ತಂಡದ ಕಲಾವಿದರಿಂದ ಜಿನಗಾನೋತ್ಸವ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.