ಮುಡಿಪು (ದಕ್ಷಿಣ ಕನ್ನಡ): ‘ಅಯೋಧ್ಯೆಯಲ್ಲಿ ಇದೇ 22ರಂದು ಏರ್ಪಡಿಸಿರುವ ಶ್ರೀರಾಮಮಂದಿರ ಉದ್ಘಾಟನಾ ಸಮಾರಂಭವು ನಮ್ಮ ಸಮಾಜ ಹಾಗೂ ದೇಶವನ್ನು ಒಗ್ಗೂಡಿಸುವ ಹಾಗೂ ದೇಶಕ್ಕೆ ಕೀರ್ತಿ ತರುವ ಸಮಾರಂಭ ಆಗಲಿ’ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಇಲ್ಲಿಗೆ ಸಮೀಪದ ನರಿಂಗಾನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪ್ರತಿ ಗ್ರಾಮದಲ್ಲೂ ಸೌಹಾರ್ದ, ಸೋದರತ್ವ, ಪ್ರೀತಿ ವಿಶ್ವಾಸ ನೆಲೆಗೊಳ್ಳಲು ಪ್ರೇರಣೆ ಆಗುವ ಕಾರ್ಯಕ್ರಮವಿದು. ಈ ಕಾರ್ಯಕ್ರಮಕ್ಕೆ ಸಂತೋಷದಿಂದ ಶುಭಾಶಯ ಸಲ್ಲಿಸುತ್ತೇನೆ’ ಎಂದರು.
ಕಾರ್ಯಕ್ರಮಕ್ಕೆ ಆಹ್ವಾನ ಬಂದರೆ ಭಾಗವಹಿಸುತ್ತೀರಾ ಎಂಬ ಪ್ರಶ್ನೆಗೆ, ‘ಸಮಯಾವಕಾಶ ಸಿಕ್ಕಿದರೆ ಯಾರೂ ಹೋಗಬಹುದು. ಉದ್ಘಾಟನೆ ಸಮಾರಂಭಕ್ಕೆ ಹೋದರೆ ಅದರಲ್ಲಿ ತಪ್ಪಿಲ್ಲ’ ಎಂದರು.
‘ಮಕ್ಕಳು ಶೌಚಾಲಯ ಗುಡಿಸುವುದು ತಪ್ಪಲ್ಲ’
‘ಶಾಲೆಯಲ್ಲಿ ವಿದ್ಯಾರ್ಥಿಗಳು ಬಳಸುವ ಶೌಚಾಲಯವನ್ನು ವಿದ್ಯಾರ್ಥಿಗಳೇ ಸ್ವಚ್ಛಗೊಳಿಸುವ ವಿಚಾರದಲ್ಲಿ ತಪ್ಪು ಹುಡುಕಬೇಕಾಗಿಲ್ಲ. ಅದಕ್ಕೆ ಬೇಕಾದ ಕೈಗವಸು ಮತ್ತಿತರ ಪರಿಕರಗಳನ್ನು ಆಡಳಿತ ಮಂಡಳಿ ಒದಗಿಸಬೇಕು. ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸಬಾರದು. ನಾವು ವಿದ್ಯಾರ್ಥಿಗಳಾಗಿದ್ದಾಗ ಶಾಲೆಯ ಶೌಚಾಲಯವನ್ನು ನಾವೇ ಸ್ವಚ್ಛಗೊಳಿಸುತ್ತಿದ್ದೆವು. ಅದೂ ಶಿಕ್ಷಣದ ಒಂದು ಭಾಗ. ಮಕ್ಕಳು ಸ್ವಾವಲಂಬಿಗಳಾಗಬೇಕೆಂದು ನಮ್ಮ ಮನೆಯಲ್ಲೂ ಮಕ್ಕಳಿಗೆ ಅದನ್ನು ಕಲಿಸುತ್ತೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.