ADVERTISEMENT

ಮಂಗಳೂರು| ಸರಣಿ ಹಬ್ಬಗಳು: ಹೂವು, ಹಣ್ಣಿನ ಬೆಲೆ ಗಗನಕ್ಕೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 5:17 IST
Last Updated 22 ಸೆಪ್ಟೆಂಬರ್ 2025, 5:17 IST
ಮಂಗಳೂರಿನ ಸ್ಟೇಟ್‌ಬ್ಯಾಂಕ್‌ ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಮಾಡುತ್ತಿರುವ ಗ್ರಾಹಕರು
ಮಂಗಳೂರಿನ ಸ್ಟೇಟ್‌ಬ್ಯಾಂಕ್‌ ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಮಾಡುತ್ತಿರುವ ಗ್ರಾಹಕರು   

ಮಂಗಳೂರು: ಜಿಲ್ಲೆಯಾದ್ಯಂತ ನವರಾತ್ರಿ ಹಬ್ಬಕ್ಕೆ ಸಿದ್ಧತೆ ಭರದಿಂದ ಸಾಗುತ್ತಿವೆ. ಮಾರುಕಟ್ಟೆಯಲ್ಲೂ ಜನ ದಟ್ಟಣೆ ಹೆಚ್ಚಾಗಿದ್ದು, ಬೆಲೆ ಏರಿಕೆಯ ಮಧ್ಯೆಯೂ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿ ಖರೀದಿ ಭರಾಟೆ ಜೋರಾಗಿದೆ.

ಇಲ್ಲಿನ ಸ್ಟೇಟ್‌ಬ್ಯಾಂಕ್‌, ಮಲ್ಲಿಕಟ್ಟೆಯ ಹೂವು ಮತ್ತು ಹಣ್ಣಿನ ಮಾರುಕಟ್ಟೆ ಹಾಗೂ ರಥಬೀದಿ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಗ್ರಾಹಕರ ದಟ್ಟಣೆ ಹೆಚ್ಚಾಗಿದೆ.

ನವರಾತ್ರಿ ಸಂದರ್ಭ ಪೂಜೆ, ಅಲಂಕಾರಕ್ಕೆ ಹೂವಿಗೆ ಭಾರಿ ಬೇಡಿಕೆ ಇದ್ದು, ಧಾರಣೆಯಲ್ಲೂ ಏರಿಕೆಯಾಗುತ್ತಿದೆ. ಉಡುಪಿ ಮಲ್ಲಿಗೆ ಒಂದು ಚೆಂಡಿಗೆ (3 ಅಡಿ) ₹600 ದರ ಇದ್ದು, ಅಟ್ಟಿಗೆ (12 ಅಡಿ) ₹2,400 ಇದೆ. ಹಬ್ಬದ ಋತುವಾದ್ದರಿಂದ ಉಡುಪಿ ಮಲ್ಲಿಗೆ ಧಾರಣೆ ಏರಿಕೆ ಆಗುತ್ತಲೇ ಇದೆ ಎಂದು ಹೂವಿನ ವ್ಯಾಪಾರಿ ರಾಜು ತಿಳಿಸಿದರು.

ADVERTISEMENT

ಕೆಲ ದಿನಗಳ ಹಿಂದೆ ಬಿಳಿ ಸೇವಂತಿಗೆ ಮಾರುವಿಗೆ ₹80ರಿಂದ 100ರ ಆಸುಪಾನಲ್ಲಿತ್ತು. ಆದರೆ, ಈಗ ಮಾರು ₹150, ಮೊಳಕ್ಕೆ ₹50 ಇದೆ. ಹಳದಿ ಸೇವಂತಿಗೆ ಒಂದು ಮಾರು ಬೆಲೆ ₹80 ಇದ್ದು, ಮೊಳಕ್ಕೆ ₹30 ದರ ಇದೆ.

ಕಾಕಡ ಮಾರು ಹೂವಿಗೆ ₹100, ಮೊಳಕ್ಕೆ ₹40, ಸಣ್ಣ ಗುಲಾಬಿ ಹೂ ಮಾರುವಿಗೆ ₹150, ಮೊಳಕ್ಕೆ ₹50, ಜೀನಿಯಾ ಹಾರ ಮಾರುವಿಗೆ ₹100, ಮೊಳಕ್ಕೆ ₹40, ಚೆಂಡು ಹೂ ಮಾರುವಿಗೆ ₹100, ಮೊಳಕ್ಕೆ ₹40, ಕಣಗಿಲೆ ಮಾರುವಿಗೆ ₹80, ಮೊಳಕ್ಕೆ ₹30, ತುಳಸಿ ಮಾಲೆ ಮಾರುವಿಗೆ ₹100, ಮೊಳಕ್ಕೆ ₹40, ಜಾಜಿ ಒಂದು ಚೆಂಡಿಗೆ ಶುಕ್ರವಾರ ₹130 ದರವಿತ್ತು. ಶನಿವಾರ ಚೆಂಡಿಗೆ ₹150, ಅಟ್ಟೆ ₹600ಕ್ಕೆ ಜಿಗಿದಿದೆ.

ಹಣ್ಣಿನ ದರದಲ್ಲೂ ಏರಿಕೆ: ಕೆಲವು ದಿನಗಳ ಹಿಂದೆ ಕೆ.ಜಿ.ಗೆ ₹140 ಇದ್ದ ದೊಡ್ಡ ಗಾತ್ರದ ಸೇಬು ಬೆಲೆ ಸದ್ಯ ₹160ಕ್ಕೆ ಏರಿಕೆಯಾಗಿದ್ದು, ಸಣ್ಣ ಗಾತ್ರದ ಸೇಬು ₹100ರಿಂದ 120ಕ್ಕೆ ಮರಾಟವಾಗುತ್ತಿದೆ.

ಪೇರಳೆ ₹70, ದಾಳಿಂಬೆ ₹160, ಮ್ಯಾಂಡರಿನ್ ಕಿತ್ತಳೆ ₹240, ಕಿತ್ತಳೆ ₹80, ಮೂಸಂಬಿ ₹60, ಡ್ರ್ಯಾಗನ್ ₹140, ಲಿಚಿ ₹300, ಕಿವಿ ₹120, ಸೀತಾಫಲ ₹140, ಚಿಕ್ಕು ₹80, ಪಪ್ಪಾಯ ₹60, ಕಲ್ಲಂಗಡಿ ₹30, ಕರಬೂಜ ₹50, ಅನಾನಸು ₹70, ಮಾವು ₹200, ಮರಸೇಬು ₹150, ಒಮಾನ್ ದ್ರಾಕ್ಷಿ ₹550, ಪಿಯರ್ಸ್ ₹280, ರೆಡ್ ಗ್ಲೋಬ್ ದ್ರಾಕ್ಷಿ ₹400, ನಿಂಬೆ 2ಕ್ಕೆ ₹10, ನೇಂದ್ರ ಬಾಳೆ ₹70, ಮೈಸೂರು ಬಾಳೆ ₹50, ಪಚ್ಚ ಬಾಳೆ ₹40, ಚಿಕ್ಕಿ ಬಾಳೆ ₹50, ಸಣ್ಣ ಗಾತ್ರದ ಏಲಕ್ಕಿ ಬಾಳೆ ₹60, ದೊಡ್ಡ ಏಲಕ್ಕಿ ಬಾಳೆ ಹಣ್ಣು ₹80ಕ್ಕೆ ಮಾರಾಟವಾಗುತ್ತಿದೆ.

ತರಕಾರಿಯೂ ದುಬಾರಿ: ಟೊಮೆಟೊ, ಈರುಳ್ಳಿ, ಆಲೂಗಡ್ಡೆ ದರ ₹5 ಏರಿಕೆಯಾಗಿದ್ದು, ಬೀನ್ಸ್, ನುಗ್ಗೆಕಾಯಿಗೆ ಬೇಡಿಕೆ ಹೆಚ್ಚಾಗಿದೆ. ಉಳಿದ‌ ತರಿಕಾರಿಗಳ ಬೆಲೆ ₹10ರಿಂದ ₹20 ಹೆಚ್ಚಾಗಿದೆ. ಹಬ್ಬ ಪ್ರಾರಂಭವಾದರೆ ತರಕಾರಿ ದರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.

ಟೊಮೆಟೊ ₹30, ಈರುಳ್ಳಿ ₹25, ಆಲೂಗಡ್ಡೆ ₹25, ಕ್ಯಾಬೇಜ್‌ ₹40, ಹೂಕೋಸು ₹60, ಬೆಂಡೆಕಾಯಿ ₹60, ತೊಂಡೆಕಾಯಿ ₹80, ಸೌತೆಕಾಯಿ ₹40, ಮುಳ್ಳುಸೌತೆ ₹80, ಬದನೆಕಾಯಿ ₹60, ಹಸಿರು ಬದನೆ ₹80, ಕ್ಯಾಪ್ಸಿಕಂ ₹80, ಬೀಟ್‌ರೂಟ್‌ ₹60, ಬೀನ್ಸ್ ₹80, ನುಗ್ಗೆಕಾಯಿ ₹160, ಸೋರೆಕಾಯಿ ₹60, ಊರಿನ ಸೋರೆಕಾಯಿ ₹80, ಹಾಗಲಕಾಯಿ ₹80, ಊರಿನ ಹಾಗಲಕಾಯಿ ₹120, ಊರಿನ ಹೀರೆಕಾಯಿ ₹80, ಘಾಟಿ ಹೀರೆಕಾಯಿ ₹60, ಸಾಂಬಾರ್ ಸೌತೆ ₹60, ಮೆಣಸಿನಕಾಯಿ ₹80, ಚಿಕ್ಕ ಮೆಣಸು ₹120, ಅಲಸಂದೆ ₹80, ಬಟಾಣಿ ₹160, ಮೂಲಂಗಿ ₹60, ಕ್ಯಾರೆಟ್ ₹60, ಶುಂಠಿ ₹60, ಕೆಸುವಿನ ಗಡ್ಡೆ ₹80, ಬೂದುಗುಂಬಳ ಕೆ.ಜಿಗೆ ₹50 ರಂತೆ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಬೆಳ್ಳುಳ್ಳಿ ದರ ಇಳಿಕೆ: ತೀವ್ರವಾಗಿ ಏರಿಕೆ ಕಂಡಿದ್ದ ಬೆಳ್ಳುಳ್ಳಿ ದರ ಈಗ ಇಳಿಕೆಯಾಗಿದೆ. ₹180ರ ಆಸುಪಾಸಿನಲ್ಲಿದ್ದ ಬೆಳ್ಳುಳ್ಳಿ ಬೆಲೆ ಕೆ.ಜಿಗೆ ₹160ಕ್ಕೆ ಇಳಿದಿದೆ.

ಬಸಳೆ ಕೆ.ಜಿಗೆ ₹60, ಸಬ್ಬಸಿಗೆ ದೊಡ್ಡ ಕಟ್ಟಿಗೆ ₹20, ಪಾಲಕ್ ₹25, ಮೆಂತೆ ₹30, ಹರಿವೆ ₹25, ಕೊತ್ತಂಬರಿ ಸೊಪ್ಪು ಕೆ.ಜಿಗೆ ₹100, ಕರಿಬೇವು ಕೆ.ಜಿಗೆ ₹50 ದರ ಇದೆ.

ದರ ಮತ್ತಷ್ಟು ಹೆಚ್ಚಬಹುದು
ಮಂಗಳೂರು ಮಾರುಕಟ್ಟೆಗೆ ಹಾಸನ ಚಿಕ್ಕಮಗಳೂರು ಹಾಗೂ ಬೆಂಗಳೂರು ಭಾಗದಿಂದ ತರಕಾರಿ ಆವಕವಾಗುತ್ತದೆ. ಆ ಭಾಗದಲ್ಲಿ ಭಾರಿ ಮಳೆ ಆಗಿರುವುದರಿಂದ ತರಕಾರಿ ಕೊಳೆತು ಹೋಗಿದ್ದು ಆವಕ ಕಡಿಮೆಯಾಗಿದೆ. ಆಯುಧ ಪೂಜೆಯ ವೇಳೆಗೆ ತರಕಾರಿ ದರ ಮತ್ತಷ್ಟು ಹೆಚ್ಚಬಹುದು. ಉತ್ತಮ ಗುಣಮಟ್ಟದ ಸೊಪ್ಪೂ ಸಿಗುತ್ತಿಲ್ಲ ಎಂದು ವ್ಯಾಪಾರಿ ಮಹಮ್ಮದ್ ಇರ್ಫಾನ್ ಹೇಳಿದರು. ಹಾರಗಳು ದುಬಾರಿ: ಹೂವಿನ ಹಾರಗಳ ಬೆಲೆ ₹100ರಿಂದ ₹ 400ರವರೆಗೆ ಇದೆ. ಮಿಶ್ರ ಫಲಗಳ ಬುಟ್ಟಿಗೆ ₹120ರಿಂದ ₹130ರವರೆಗೆ ಇದೆ. ಪೂಜಾ ಸಾಮಗ್ರಿ ಬೆಲೆ ಏರಿಕೆ: ದುರ್ಗಾ ವಿಗ್ರಹ ಅಥವಾ ಚಿತ್ರ ಕಲಶ ಮಾವಿನ ಎಲೆಗಳು ಅರಿಶಿಣ ಕುಂಕುಮ ಧೂಪ ದೀಪ ಬತ್ತಿ ಕರ್ಪೂರ ತೆಂಗಿನಕಾಯಿ ವೀಳ್ಯದೆಲೆ-ಅಡಿಕೆ ಸಿಹಿ ತಿಂಡಿಗಳ ಬೆಲೆಯೂ ದುಬಾರಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.