ಮಂಗಳೂರು: ನಗರದ ಪಡೀಲ್ ದರ್ಬಾರ್ ಹಿಲ್ ನಲ್ಲಿರುವಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್ ಇಲ್ಲದೇ, ಜನರೇಟರೂ ಇಲ್ಲದೆ ಹಲವು ಗಂಟೆಗಳ ಕಾಲ ಪ್ರಯಾಣಿಕರು ಮೊಬೈಲ್ ಟಾಚ್೯ ಹಿಡಿದುಕೊಂಡೇ ರೈಲನ್ನೇರಿದ ಪ್ರಸಂಗ ಮಂಗಳವಾರ ರಾತ್ರಿ ವೇಳೆ ನಡೆದಿದೆ.
ಇದು ಈ ಪ್ರದೇಶದ ಅತ್ಯಂತ ಜನನಿಬಿಡ ರೈಲ್ವೆ ಜಂಕ್ಷನ್ ಆಗಿದ್ದು, ಉತ್ತರ ಮತ್ತು ದಕ್ಷಿಣದ ರೈಲುಗಳು ಈ ನಿಲ್ದಾಣದ ಮೂಲಕ ಮಂಗಳೂರು ತಲುಪುತ್ತವೆ. ಸೋಮವಾರ ರಾತ್ರಿಯೂ ಉತ್ತರಭಾರತ ಹಾಗೂ ಕೇರಳಕ್ಕೆ ತೆರಳುವ ರೈಲನ್ನೇರಲು ಸಾವಿರಕ್ಕಿಂತಲೂ ಅಧಿಕ ಪ್ರಯಾಣಿಕರಿದ್ದರು. ಅದರೆ ಸಂಜೆ 7 ರ ಸುಮಾರಿಗೆ ರೈಲು ನಿಲ್ದಾಣದಲ್ಲಿ ವಿದ್ಯುತ್ ಹೋಗಿತ್ತು. ಅದರ ಬದಲಿಗೆ ಕಾರ್ಯಾಚರಿಸಬೇಕಾದ ಜನರೇಟರ್ ಕಾರ್ಯಾಚರಿಸದೇ, ಇಡೀ ರೈಲು ನಿಲ್ದಾಣ ಕತ್ತಲೆಯಲ್ಲಿ ಮುಳುಗಿತ್ತು.
ಕೆಲ ಗಂಟೆ ಕಾಲ ಟಿಕೆಟ್ ಕೌಂಟರ್, ಒಂದು ಇನ್ವರ್ಟರ್ ಮೂಲಕಕಾರ್ಯಾಚರಣೆ ನಡೆಸಿದ್ದ ಫಲವಾಗಿ ಪ್ರಯಾಣಿಕರಿಗೆ ಟಿಕೆಟ್ ವ್ಯವಸ್ಥೆ ಆಯಿತು. ಆದರೆ ಬಳಿಕ ಇನ್ವರ್ಟರ್ ಕೂಡಾ ಸ್ಥಗಿತವಾಗಿ, ರೈಲ್ವೆ ನಿಲ್ದಾಣವಿಡೀ ಕತ್ತಲೆಯಿಂದ ಮುಳುಗಿತು.
ಪ್ರಯಾಣಿಕರು ರೈಲುಗಳ ಮಾಹಿತಿಯೂ ಸಿಗದೆ,ದೀಪಗಳಿಲ್ಲದೆ ನಡೆದುಕೊಂಡು ಹೋಗಲು ಸಾಧ್ಯವಾಗದೇ, ಅಲ್ಲಲ್ಲಿ ಎದ್ದುಬಿದ್ದು ರೈಲನ್ನೇರಿದರು. ಅವ್ಯವಸ್ಥೆ ಕುರಿತು ಜವಾಬ್ದಾರಿ ಹೊರಬೇಕಾದ ಅಧಿಕಾರಿಗಳು ಪ್ರಯಾಣಿಕರ ಕಣ್ಣಿಗೆ ಸಿಗದೇ ತಪ್ಪಿಸಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.