ADVERTISEMENT

ಮಂಗಳೂರು: ಕಾಲುವೆಯೇ ಕಂಟಕ; ವಾಸನೆಯ ಸಂಕಟ

ತೋಡಿನಲ್ಲಿರುವ ಕಸ, ನಿರುಪಯುಕ್ತ ಪೈಪ್‌ಗಳನ್ನು ತೆರವುಗೊಳಿಸಲು ಆಗ್ರಹ

ಸಂಧ್ಯಾ ಹೆಗಡೆ
Published 4 ನವೆಂಬರ್ 2025, 7:32 IST
Last Updated 4 ನವೆಂಬರ್ 2025, 7:32 IST
ಅತ್ತಾವರ ಚಕ್ರಪಾಣಿ ಗೋಪಿನಾಥ ದೇವಾಲಯದ ಸಮೀಪದ ದೊಡ್ಡ ಚರಂಡಿ
ಅತ್ತಾವರ ಚಕ್ರಪಾಣಿ ಗೋಪಿನಾಥ ದೇವಾಲಯದ ಸಮೀಪದ ದೊಡ್ಡ ಚರಂಡಿ   

ಮಂಗಳೂರು: ವಸತಿ ಬಡಾವಣೆಯ ನಡುವೆ ಹಾದು ಹೋಗುವ ಎರಡು ಮುಖ್ಯ ಕಾಲುವೆಗಳೇ ಮಿಲಾಗ್ರಿಸ್ ವಾರ್ಡ್‌ ನಿವಾಸಿಗಳಿಗೆ ನಿತ್ಯ ನಿರಂತರ ಸಮಸ್ಯೆ ತಂದೊಡ್ಡಿವೆ.

ಪ್ರಮುಖ ಸೂಪರ್ ಮಾರ್ಕೆಟ್‌ಗಳು, ಆಸ್ಪತ್ರೆ, ವಸತಿ ಸಮುಚ್ಚಯಗಳನ್ನು ಒಳಗೊಂಡಿರುವ ವಾರ್ಡ್ ಇದು. ಅನೇಕ ಅಪಾರ್ಟ್‌ಮೆಂಟ್‌ನವರು ಹೊಲಸು ನೀರನ್ನು ನೇರವಾಗಿ ದೊಡ್ಡ ಚರಂಡಿಗೆ ಬಿಡುತ್ತಾರೆ. ಇದರಿಂದ ಪರಿಸರ ಮಲೀನಗೊಂಡು, ದುರ್ವಾಸನೆ ಹರಡುತ್ತದೆ. ಈ ಬಗ್ಗೆ ಮಹಾನಗರ ಪಾಲಿಕೆ, ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ದೂರು ನೀಡಲಾಗಿದೆ. ಈವರೆಗೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ ಎಂಬುದು ಸ್ಥಳೀಯ ನಿವಾಸಿಗಳ ದೂರು. 

ಪ್ರತಿವರ್ಷ ಮಳೆಗಾಲದಲ್ಲಿ ಇಡೀ ಪ್ರದೇಶ ಹೊಳೆಯಂತಾಗುತ್ತದೆ. ಮಳೆಗಾಲ ಬಂತೆಂದರೆ ಎಲ್ಲರಿಗು ಮನದಲ್ಲಿ ತಳಮಳ. ನಿರಂತರ ಮಳೆ ಸುರಿದರೆ ಮನೆಯೊಳಗೆ ನೀರು ನಗ್ಗುತ್ತದೆ. ಮಳೆಗಾಲ ಪೂರ್ವದಲ್ಲಿ ಕೆಲವು ಕಡೆಗಳಲ್ಲಿ ಪಾಲಿಕೆಯವರು ತೋಡು ಸ್ವಚ್ಛ ಮಾಡುತ್ತಾರೆ. ಆದರೆ, ತೋಡಿನಲ್ಲಿರುವ ಹಳೆ ಪೈಪ್‌ಗಳು, ಕಲ್ವರ್ಟ್ ನಿರ್ಮಾಣದ ವೇಳೆ ಕಿರಿದಾಗಿರುವ ತೋಡಿನ ಗಾತ್ರದ ಪರಿಣಾಮವಾಗಿ ಮಳೆ ನೀರು ಉಕ್ಕಿ ಇಡೀ ಪ್ರದೇಶವನ್ನು ಆವರಿಸುತ್ತದೆ. ಈ ಬಾರಿ ಮಳೆಗಾಲದಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿ, ಎಲೆಕ್ಟ್ರಾನಿಕ್ ಉಪಕರಣಗಳು ಹಾಳಾಗಿ, ನಷ್ಟ ಉಂಟಾಗಿದೆ ಎಂದು ಅತ್ತಾವರದ ನಿವಾಸಿಯೊಬ್ಬರು ಹೇಳಿದರು.

ADVERTISEMENT

ಮಳೆ ನೀರು ಹರಿಯುವ ದೊಡ್ಡ ಕಾಲುವೆಯ ಸಮೀಪ ಇರುವ ಚಕ್ರಪಾಣಿ ದೇವಸ್ಥಾನದ ಆವರಣಕ್ಕೂ ನೀರು ನುಗ್ಗಿತ್ತು ಎಂದು ಇನ್ನೊಬ್ಬರು ತಿಳಿಸಿದರು.

ಈ ಭಾಗದಲ್ಲಿ ಹೊಸದಾಗಿ ರಸ್ತೆ ನಿರ್ಮಾಣ ಮಾಡುವ ವೇಳೆ ಮೊದಲಿದ್ದ ಹಂಪ್‌ಗಳನ್ನು ತೆರವುಗೊಳಿಸಲಾಗಿತ್ತು. ರಸ್ತೆ ನಿರ್ಮಾಣವಾದ ಮೇಲೆ ಹಂಪ್‌ಗಳನ್ನು ಪುನಃ ಅಳವಡಿಸಿಲ್ಲ. ಇದರಿಂದ ಹಿರಿಯ ನಾಗರಿಕರಿಗೆ ರಸ್ತೆ ದಾಟುವಾಗ ಸಮಸ್ಯೆಯಾಗುತ್ತದೆ. ವೇಗವಾಗಿ ವಾಹನಗಳು ಸಂಚರಿಸುವುದರಿಂದ ಅಪಘಾತ ಸಂಭವಿಸುವ ಅಪಾಯ ಇದೆ ಎಂದು ಹಿರಿಯ ನಾಗರಿಕರೊಬ್ಬರು ಹೇಳಿದರು.

ಹೈಲ್ಯಾಂಡ್ ಎರಡೂ ಬದಿಯಲ್ಲಿ, ಮಿಲಾಗ್ರಿಸ್ ಚರ್ಚ್ ಸಮೀಪ, ಹಾವೇರಿ ಜಂಕ್ಷನ್ ಸೇರಿದಂತೆ ವಾರ್ಡ್‌ನಲ್ಲಿ ಅಗತ್ಯವಿರುವ ಕಡೆ ಬಸ್ ತಂಗುದಾಣ ನಿರ್ಮಿಸಿದರೆ, ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಮಿಲಾಗ್ರಿಸ್ ಮತ್ತು ಫಳ್ನೀರ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ. ಧರ್ಮಣ ನಾಯ್ಕ ಒತ್ತಾಯಿಸಿದರು.

ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ: ಮುಖ್ಯರಸ್ತೆಗೆ ಹೊಂದಿ ಕೊಂಡಿರುವ ನಮ್ಮ ಅಪಾರ್ಟ್‌ಮೆಂಟ್‌ನಿಂದ ರಸ್ತೆ ವಿಸ್ತರಣೆ ವೇಳೆ ಐದು ಅಡಿ ಜಾಗವನ್ನು ಪಾಲಿಕೆಗೆ ಬಿಟ್ಟುಕೊಟ್ಟಿದ್ದೇವೆ. ಆ ಜಾಗದಲ್ಲಿ ಚರಂಡಿ ಸಹಿತ ಪಾದಚಾರಿ ಮಾರ್ಗ ನಿರ್ಮಾಣವಾಗಿದೆ. ಅವೈಜ್ಞಾನಿಕ ಚರಂಡಿ ನಿರ್ಮಾಣ, ಪಕ್ಕದ ಕಟ್ಟಡದ ಅಭಿವೃದ್ಧಿ ಕಾಮಗಾರಿ ಪರಿಣಾಮವಾಗಿ ನಮ್ಮ ‍ಕಟ್ಟಡಕ್ಕೆ ಪ್ರತಿವರ್ಷ ಮಳೆಗಾಲದಲ್ಲಿ ತೊಂದರೆಯಾಗುತ್ತದೆ ಎಂದು ಫಳ್ನೀರ್‌ನ ಎಂಸಿಪಿಎಲ್ ಅಪಾರ್ಟ್‌ಮೆಂಟ್‌ ಅಧ್ಯಕ್ಷ ಬಿ. ಮೊಹಮ್ಮದ್ ಅಲಿ ಹೇಳಿದರು.

ಚರಂಡಿ ಒಳಗಿರುವ ವಿದ್ಯುತ್‌ ಕಂಬದಿಂದ ನಮ್ಮ ಅಪಾರ್ಟ್‌ಮೆಂಟ್‌ಗೆ ಸಂಪರ್ಕ ನೀಡಲಾಗಿದ್ದು, ತಗ್ಗಿನಲ್ಲಿರುವ ನಮ್ಮ ವಿದ್ಯುತ್ ಸಂಪರ್ಕ ಕೊಠಡಿಗೆ ಮಳೆಗಾಲದಲ್ಲಿ ನೀರು ನುಗ್ಗಿ ಹಾನಿಯಾಗುತ್ತದೆ. 2022ರಿಂದ ಮಹಾನಗರ ಪಾಲಿಕೆ ಆಯುಕ್ತರು, ಜನಪ್ರತಿನಿಧಿಗಳು ಎಲ್ಲರಿಗೂ ಹಲವಾರು ಮನವಿ ಸಲ್ಲಿಸಲಾಗಿದೆ. ಐದು ಮೀಟರ್‌ನಷ್ಟು ಚರಂಡಿ ವಿಸ್ತರಣೆ ಮಾಡಿದರೆ ಸಮಸ್ಯೆ ಪರಿಹಾರ ಆಗುತ್ತದೆ. ಶಾಸಕರು ಕೂಡ ಈ ಕಾಮಗಾರಿ ನಡೆಸುವಂತೆ ಸೂಚಿಸಿದ್ದರೂ, ಪ್ರಯೋಜನವಾಗಿಲ್ಲ ಎಂದು ಬೇಸರಿಸಿದರು. 

ಚರಂಡಿ ಮೂಲಕ ಹಾದುಹೋಗಿರುವ ಪೈಪ್‌ಗಳು
ಧರ್ಮಣ ನಾಯ್ಕ

Highlights - ಫುಟ್‌ಪಾತ್ ಅತಿಕ್ರಮಿಸಿ ವಾಹನ ನಿಲುಗಡೆಗೆ ಅವಕಾಶ ಹೆಚ್ಚುತ್ತಿರುವ ಬ್ಲ್ಯಾಕ್ ಸ್ಪಾಟ್‌ಗಳು ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಆಗ್ರಹ

ಸಾರ್ವಜನಿಕರಲ್ಲೂ ಸ್ವಚ್ಛತೆಯ ಅರಿವು ಮೂಡಬೇಕು. ಎಲ್ಲವನ್ನೂ ಆಡಳಿತ ಮಾಡಲು ಸಾಧ್ಯವಿಲ್ಲ. ತೋಡಿಗೆ ಕಸ ಎಸೆಯುವುದರಿಂದ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗುತ್ತದೆ.
ಬಿ. ಧರ್ಮಣ ನಾಯ್ಕ ಮಿಲಾಗ್ರಿಸ್ ಮತ್ತು ಫಳ್ನೀರ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ

ಬಹಿರ್ದೆಸೆ ಮುಕ್ತಗೊಳಿಸಿ

ಬ್ರಿಟ್ಟೊ ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಸ ಎಸೆದು ಹೋಗುತ್ತಾರೆ. ಅಲ್ಲದೆ ಈ ರಸ್ತೆಗೆ ಬಂದು ನಿಸರ್ಗ ಕರೆ ತೀರಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಈ ರಸ್ತೆಯನ್ನು ಬಹಿರ್ದೆಸೆ ಮುಕ್ತ ಮಾಡಲು ಪಾಲಿಕೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರ ನಿವೇದಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.