ADVERTISEMENT

ಮೌಲಾನಾ ಆಜಾದ್‌ ಭವನಕ್ಕೆ ಕಲ್ಲು

ಕೃತ್ಯ ಎಸಗಿರುವ ಆರೋಪಿಗಳ ಚಹರೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 16:47 IST
Last Updated 14 ಆಗಸ್ಟ್ 2020, 16:47 IST

ಮಂಗಳೂರು: ನಗರದ ಪಾಂಡೇಶ್ವರದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ಜಿಲ್ಲಾಮಟ್ಟದ ಕಚೇರಿಗಳಿರುವ ಮೌಲಾನಾ ಆಜಾದ್‌ ಅಲ್ಪಸಂಖ್ಯಾತರ ಭವನಕ್ಕೆ ದುಷ್ಕರ್ಮಿಗಳು ಗುರುವಾರ ರಾತ್ರಿ ಕಲ್ಲು ತೂರಿದ್ದು, ಕಿಟಕಿ ಗಾಜುಗಳಿಗೆ ಹಾನಿಯಾಗಿದೆ.

ತಡರಾತ್ರಿ 12.30ರ ಸುಮಾರಿಗೆ ಆರೋಪಿಗಳು ಭವನದ ಮೇಲೆ ಕಲ್ಲು ತೂರಿ ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ಅಧಿಕಾರಿ ಫಾರೂಕ್‌ ನೀಡಿರುವ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿ ಕೊಂಡಿರುವ ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆ ಪೊಲೀಸರು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

‘ಮೂವರು ಸಿಬ್ಬಂದಿ ಭವನದ ಮೂರನೇ ಮಹಡಿಯಲ್ಲಿ ಮಲಗಿದ್ದರು. ಶಬ್ದ ಕೇಳಿ ಅವರು ಹೊರಬಂದಾಗ ಮೊದಲನೇ ಮಹಡಿಯ ಗಾಜುಗಳು ಪುಡಿಯಾಗಿದ್ದವು. ರಸ್ತೆಯಲ್ಲಿ ಕೆಲವರು ಓಡಿ ಹೋಗುತ್ತಿರುವುದು ಕಂಡುಬಂತು’ ಎಂದು ಫಾರೂಕ್‌ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಮೌಲಾನಾ ಆಜಾದ್‌ ಭವನವು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಕಚೇರಿಯಿಂದ 500 ಮೀಟರ್‌ ದೂರದಲ್ಲಿದೆ. ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ, ಅಭಿವೃದ್ಧಿ ಮಂಡಳಿಯ ಹಲವು ಕಚೇರಿಗಳು ಈ ಕಟ್ಟಡದಲ್ಲಿವೆ. ನಗರ ಪೊಲೀಸ್ ಕಮಿಷನರ್‌ ವಿಕಾಸ್‌ ಕುಮಾರ್‌ ವಿಕಾಶ್ ಅವರು ಶುಕ್ರವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.