
ಮಂಗಳೂರು: ಪಣಂಬೂರು ಠಾಣಾ ವ್ಯಾಪ್ತಿಯ ಮೀನಕಳಿಯ ಪ್ರದೇಶದಿಂದ ಈಚೆಗೆ ನಾಪತ್ತೆಯಾಗಿದ್ದ 16 ವರ್ಷದ ಬಾಲಕಿ ಪತ್ತೆಯಾಗಿದ್ದಾಳೆ. ಬಾಲಕಿಯು ಮನೆಗೆ ಮರಳುವುದಕ್ಕೆ ಒಪ್ಪದ ಕಾರಣ ಪೊಲೀಸರು ಆಕೆಯನ್ನು ಬಾಲಿಕಾ ಮಂದಿರಕ್ಕೆ ಸೇರಿಸಿದ್ದಾರೆ.
ಬಾಲಕಿಯ ನಾಪತ್ತೆ ಪ್ರಕರಣ ಕೆಲವು ಸಂದೇಹಗಳನ್ನು ಹುಟ್ಟುಹಾಕಿತ್ತು. ಆಕೆಯ ಅಪಹರಣ ನಡೆದಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿತ್ತು. ಪೋಷಕರು ನೀಡಿದ ದೂರಿನ ಅನ್ವಯ ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಅಪಹರಣ ಪ್ರಕರಣವು ದಾಖಲಾಗಿತ್ತು.
‘ಪಣಂಬೂರು ಠಾಣಾ ವ್ಯಾಪ್ತಿಯ ಮೀನಕಳಿಯ ಪ್ರದೇಶದಲ್ಲಿ ಹದಿಹರೆಯದ ಬಾಲಕಿಯರನ್ನು ಹಾಗೂ ಮಹಿಳೆಯರನ್ನು ಚುಡಾಯಿಸುವ ಬಗ್ಗೆ ಅನೇಕ ದೂರುಗಳು ಬಂದಿವೆ. ಹಾಗಾಗಿ ಈ ಪ್ರದೇಶದಲ್ಲಿ ಇಲಾಖೆಯ 112 ವಾಹನಗಳ ಓಡಾಟ ಹಾಗೂ ಗಸ್ತನ್ನು ಹೆಚ್ಚಿಸಲಾಗಿದೆ. ಈ ಪ್ರದೇಶದ ರಸ್ತೆಗಳು ಕತ್ತಲಿನಿಂದ ಕೂಡಿದ್ದು, ಇಲ್ಲಿ ಬೀದಿ ದೀಪ ಅಳವಡಿಸಲು ಕ್ರಮವಹಿಸುವಂತೆ ನವಮಂಗಳೂರು ಬಂದರು ಪ್ರಾಧಿಕಾರಕ್ಕೂ ಪತ್ರ ಬರೆಯಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಮಹಿಳೆಯರನ್ನು ಅಥವಾ ಬಾಲಕಿಯರನ್ನು ಚುಡಾಯಿಸುವ ಪ್ರಕರಣಗಳು ಮರುಕಳಿಸಿದರೆ ಮಾಹಿತಿ ನೀಡಲು ಸ್ಥಳೀಯ ನಿವಾಸಿಗಳನ್ನು ಒಳಗೊಂಡ ವಾಟ್ಸ್ಆ್ಯಪ್ ಗ್ರೂಪ್ಗಳನ್ನೂ ರಚಿಸಿದ್ದೇವೆ. ಸಂಜೆ ವೇಳೆ ಇಲಾಖೆ 112 ವಾಹನದ ಗಸ್ತನ್ನು ಹೆಚ್ಚಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.