ADVERTISEMENT

ವಿದ್ಯುತ್ ತಂತಿ ಸ್ಪರ್ಶಿಸಿ ಕರುಸಾವು, ತಡೆಗೋಡೆ ಕುಸಿತ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 5:09 IST
Last Updated 16 ಜುಲೈ 2021, 5:09 IST
ಉಪ್ಪಿನಂಗಡಿ ಸಮೀಪ ನೆಕ್ಕಿಲಾಡಿ ಎಂಬಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದ ಹೋರಿ ಕರು ಮೃತಪಟ್ಟಿದೆ.
ಉಪ್ಪಿನಂಗಡಿ ಸಮೀಪ ನೆಕ್ಕಿಲಾಡಿ ಎಂಬಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದ ಹೋರಿ ಕರು ಮೃತಪಟ್ಟಿದೆ.   

ಉಪ್ಪಿನಂಗಡಿ: ಮಳೆ, ಗಾಳಿಯಿಂದಾಗಿ ನೆಕ್ಕಿಲಾಡಿ ಎಂಬಲ್ಲಿ ಬುಧವಾರ ಸಂಜೆ ನೆಲಕ್ಕೆ ಬಿದ್ದ ವಿದ್ಯುತ್ ತಂತಿ ತುಳಿದ ಹೋರಿ ಕರುವೊಂದು ಸಾವನ್ನಪ್ಪಿದೆ.

ನೆಕ್ಕಿಲಾಡಿಯ ಸಹನಾ ಕಾಂಪೌಂಡ್ ಬಳಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬದಿಂದ ತಂತಿಯೊಂದು ಏಕಾಏಕಿ ತುಂಡಾಗಿ ರಸ್ತೆಯ ಮೇಲೆ ಬಿದ್ದಿತ್ತು. ಮೇಯಲು ಬಿಟ್ಟಿದ್ದ ಹೋರಿ ಕರು ತಂತಿಯನ್ನು ತುಳಿದಿದ್ದರಿಂದ ವಿದ್ಯುತ್ ಆಘಾತಕ್ಕೊಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದೆ. ಅಟೊ ರಿಕ್ಷಾ ಚಾಲನೆಯೊಂದಿಗೆ ಹೈನುಗಾರಿಕೆಯನ್ನು ಮಾಡುತ್ತಿರುವ ಖಲಂದರ್ ಶಾಫಿ ಎಂಬುವರಿಗೆ ಸೇರಿದ ಕರು ಇದಾಗಿದೆ.

ತಪ್ಪಿದ ದುರಂತ: ‌ಸಹನಾ ಕಾಂಪೌಂಡ್‌ನಲ್ಲಿ ಹಲವು ಮನೆಗಳಿದ್ದು, ಆ ಮನೆಗಳಿಗೆ ಹೋಗುವ ದಾರಿಗೆ ಈ ವಿದ್ಯುತ್ ತಂತಿ ಬಿದ್ದಿದ್ದು, ಹೋರಿ ಮೃತಪಟ್ಟಿದ್ದರಿಂದಾಗಿ ಜನ ಎಚ್ಚರಗೊಂಡಿದ್ದರಿಂದ ಹೆಚ್ಚಿನ ಅನಾಹುತಗಳು ತಪ್ಪಿದಂತಾಗಿದೆ. ಸ್ಥಳೀಯರು ಮೆಸ್ಕಾಂನವರಿಗೆ ಮಾಹಿತಿ ನೀಡಲಾಗಿ ವಿದ್ಯುತ್ ಕಡಿತಗೊಳಿಸಲಾಯಿತು.

ADVERTISEMENT

ತಡೆಗೋಡೆ ಕುಸಿತ: ಸಹನಾ ಕಾಂಪೌಂಡ್‌ನ ಸಮೀಪದಲ್ಲೇ ಇಸಾಕ್ ಎಂಬುವರಿಗೆ ಸೇರಿದ ಕಲ್ಲಿನ ತಡೆಗೋಡೆ ಏಕಾಏಕಿ ಕುಸಿದು ಬಿದ್ದಿದೆ. ಈ ಧರೆ ಇನ್ನಷ್ಟು ಜರಿಯುವ ಸಂಭವವಿದ್ದು, ಇಲ್ಲಿರುವ ಮನೆಯೂ ಅಪಾಯಕ್ಕೀಡಾಗುವ ಸಾಧ್ಯತೆಯಿದೆ.

ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಮೆಸ್ಕಾಂ ಸಹಾಯಕ ಎಂಜಿಮಿಯರ್ ರಾಜೇಶ್, ಸಿಬ್ಬಂದಿ ಅಕ್ಬರ್, ಸಾಬಣ್ಣ, ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್, ಉಪಾಧ್ಯಕ್ಷೆ ಸ್ವಪ್ನಾ, ಸದಸ್ಯ ರಮೇಶ್ ಸ್ಥಳಕ್ಕೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.