ಸಭೆಯಲ್ಲಿ ಮಾತನಾಡಿದ ಬಿ.ಕೆ ಹರಿಪ್ರಸಾದ್
ಮಂಗಳೂರು: ಕೇರಳದ ಆಲುವಾದಲ್ಲಿ ನಡೆದ ಸರ್ವಧರ್ಮ ಸಮ್ಮೇಳನ ಮತ್ತು ನಾರಾಯಣ ಗುರು-ಮಹಾತ್ಮ ಗಾಂಧೀಜಿಯವರ ಮುಖಾಮುಖಿಯ ಶತಮಾನೋತ್ಸವವನ್ನು ಡಿಸೆಂಬರ್ 4ರಂದು ಮಂಗಳೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಯಿತು.
ಕೇರಳದ ಕೊಲ್ಲಂನ ಶಿವಗಿರಿ ಕ್ಷೇತ್ರ ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಶತಮಾನೋತ್ಸವ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯ ಆವರಣದಲ್ಲಿ ಆಯೋಜಿಸಲು ನಿರ್ಧರಿಸಲಾಯಿತು.
ಶಿವಗಿರಿಯ ಕ್ಷೇತ್ರದ ಪ್ರತಿನಿಧಿಯಾಗಿ ಬಂದಿದ್ದ ಜ್ಞಾನೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ ನಾರಾಯಣ ಗುರುಗಳ ಮಹಾಸಮಾಧಿಯ 100ನೇ ವಾರ್ಷಿಕ ಆಚರಣೆಯನ್ನು ಶಿವಗಿರಿಯಲ್ಲಿ ರಾಷ್ಟ್ರಪತಿ ಉದ್ಘಾಟನೆ ಮಾಡಿದ್ದಾರೆ. ಅದರ ಮುಂದುವರಿಕೆಯೂ ಮಂಗಳೂರಿನಲ್ಲಿ ನಡೆಯಲಿದೆ ಎಂದರು. ನಂತರ ಮೂರು ವರ್ಷ ನಿರಂತರ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಭಾರತದಲ್ಲಿ ಯತಿಪೂಜೆ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಶಿವನನ್ನು ಮುಂದಿಟ್ಟುಕೊಂಡು ಯತಿಪೂಜೆ ಮಾಡುವುದು ಸಂಪ್ರದಾಯ. ಹೀಗಾಗಿ ಕೇರಳದಿಂದ 30 ಮಂದಿ ಸೇರಿದಂತೆ ಒಟ್ಟು 50 ಯತಿಗಳನ್ನು ಗೌರವಿಸುವ ಕಾರ್ಯಕ್ರಮವೂ ಮಂಗಳೂರಿನಲ್ಲಿ ನಡೆಯಲಿದೆ ಎಂದರು.
ಮಧ್ಯಾಹ್ನದ ನಂತರ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು ಪ್ರಮುಖ ಧಾರ್ಮಿಕ ಮುಖಂಡರು ಭಾಗಿಯಾಗಲಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.
ಮುಖಂಡ ಬಿ. ಕೆ ಹರಿಪ್ರಸಾದ್ ಮಾತನಾಡಿ ಮಂಗಳೂರು ವಿಶ್ವವಿದ್ಯಾನಿಲಯದಕ್ಕಿ ನಾರಾಯಣ ಗುರು ಅಧ್ಯಯನ ಪೀಠಕ್ಕೆ ಮುಖ್ಯಮಂತ್ರಿ ₹3 ಕೋಟಿ ಮೊತ್ತ ಕೊಟ್ಟಿದ್ದಾರೆ. ಆದ್ದರಿಂದ ಅವರನ್ನು ಆಹ್ವಾನಿಸಿ ಸನ್ಮಾನಿಸಬೇಕು ಎಂದರು.
ಸತ್ಯಾನಂದ ಸ್ವಾಮೀಜಿ, ನಿತ್ಯಾನಂದ ಸ್ವಾಮೀಜಿ, ಶಾಸಕರಾದ ಸುನಿಲ್ ಕುಮಾರ್, ಉಮಾನಾಥ ಕೋಟ್ಯಾನ್, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಮುಖಂಡರಾದ ಪೀತಾಂಬ್ರ ಹೆರಾಜೆ, ರಕ್ಷಿತ್ ಶಿವರಾಂ, ಭೋಜ ಪೂಜಾರಿ, ಜಯರಾಜ್, ಪಿ.ವಿ ಮೋಹನ್, ವಿನಯಕುಮಾರ್ ಸೊರಕೆ, ಶಂಕರ ಪೂಜಾರಿ ಕಡ್ಪಾಡಿ, ಪದ್ಮರಾಜ್ ಆರ್, ಸತ್ಯಜಿತ್ ಸುರತ್ಕಲ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.