
ಮಂಗಳೂರು: ನರಿಂಗಾನ ಕಂಬಳ ಸಮಿತಿ ಆಶ್ರಯದಲ್ಲಿ ಉಳ್ಳಾಲ ತಾಲ್ಲೂಕು ನರಿಂಗಾನ ಗ್ರಾಮದ ಮೋರ್ಲ– ಬೋಳದಲ್ಲಿ ನಾಲ್ಕನೇ ವರ್ಷದ ಹೊನಲು ಬೆಳಕಿನ ಲವಕುಶ ಜೋಡುಕರೆ ನರಿಂಗಾನ ಕಂಬಳೋತ್ಸವವು ಜ.10ರಂದು ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ನರಿಂಗಾನ ಕಂಬಳವು ಸಮಾಜವನ್ನು ಬೆಸೆಯುವ, ಸೌಹಾರ್ದವನ್ನು ಕಟ್ಟುವ ವೇದಿಕೆಯಾಗಿದ್ದು, ಎಲ್ಲ ಧರ್ಮದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಜಾತಿ– ಮತದ ಭೇದವಿಲ್ಲದೆ ಸ್ವಯಂ ಪ್ರೇರಣೆಯಿಂದ ಕಾರ್ಯಕರ್ತರು ಕಂಬಳದ ಯಶಸ್ಸಿಗೆ ದುಡಿಯುತ್ತಿದ್ದಾರೆ. ಕಳೆದ ಸಾಲಿನ ಕಂಬಳದಲ್ಲಿ ಅತ್ಯಧಿಕ ಕೋಣಗಳು (265) ಬಂದಿದ್ದು, ಈ ಬಾರಿ 200ಕ್ಕೂ ಹೆಚ್ಚು ಕೋಣಗಳು ಬರುವ ನಿರೀಕ್ಷೆಯಿದೆ. ಕಳೆದ ವರ್ಷ ಮುಖ್ಯಮಂತ್ರಿ ಭಾಗವಹಿಸಿದ್ದು ಈ ಬಾರಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳುವರು’ ಎಂದರು.
ಜ.10ರಂದು ಬೆಳಿಗ್ಗೆ 9ಕ್ಕೆ ಒಡಿಯೂರು ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸುವರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ದೀಪ ಬೆಳಗಿಸುವರು. ಶ್ರೀ ಕ್ಷೇತ್ರ ಶಾಂತಿಪಳಿಕೆಯ ಪ್ರಧಾನ ತಂತ್ರಿ
ವರ್ಕಾಡಿ ಹೊಸಮನೆ ರಾಜೇಶ್ ತಾಳಿತ್ತಾಯ, ಮಂಗಳೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಫಾ. ಪೀಟರ್ ಪಾವ್ಲ್ ಸಲ್ದಾನ,
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ಕುಮಾರ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ವಿನಾಯಕ್ ನರ್ವಡೆ ಭಾಗವಹಿಸುವರು ಎಂದರು.
ಸಂಜೆ 4 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಚಿವರಾದ ದಿನೇಶ್ ಗುಂಡೂರಾವ್, ಎಚ್.ಕೆ. ಪಾಟೀಲ, ಸಂತೋಷ್ ಲಾಡ್, ಜಮೀರ್ ಅಹ್ಮದ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಕಾಸರಗೋಡು ಸಂಸದ ರಾಜಮೋಹನ್ ಉನ್ನಿತನ್ ಮೊದಲಾದವರು ಭಾಗವಹಿಸುವರು ಎಂದು ಹೇಳಿದರು.
ಕನೆ ಹಲಗೆ, ಅಡ್ಡ ಹಲಗೆ, ಹಗ್ಗ, ನೇಗಿಲು ವಿಭಾಗದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಟ್ರೋಫಿ ನೀಡಲಾಗುವುದು. ಸಾಮಾನ್ಯವಾಗಿ ಎಲ್ಲ ಕಂಬಳಗಳಲ್ಲಿ ಮೊದಲ ಎರಡು ಬಹುಮಾನಗಳು ಇದ್ದರೆ, ನಮ್ಮ ಕಂಬಳದಲ್ಲಿ ನಾಲ್ಕು ಬಹುಮಾನಗಳನ್ನು ನೀಡಲಾಗುತ್ತದೆ. ನಿಶಾನೆಗೆ ನೀರು ಹಾಯಿಸಿದ ಎಲ್ಲ ಕೋಣಗಳಿಗೂ ಬಹುಮಾನ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಕೋಣಗಳ ಯಜಮಾನರಿಗೆ ಬೆಳ್ಳಿಯ ಪದಕ ಹಾಗೂ ಟ್ರೋಫಿ ಕೊಟ್ಟು ಗೌರವಿಸಲಾಗುವುದು ಎಂದು ಸಮಿತಿಯ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ ಹೇಳಿದರು.
ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ನವಾಝ್ ನರಿಂಗಾನ, ಕಣಚೂರು ಸಮೂಹ ಸಂಸ್ಥೆಯ ಅಧ್ಯಕ್ಷ ಯು.ಕೆ. ಮೋನು, ಉಪಾಧ್ಯಕ್ಷ ಮ್ಯಾಕ್ಸಿಯಂ ಡಿಸೋಜ, ಸತೀಶ್ ಕುಮಾರ್ ಪುಂಡಿಕೈ ಉಪಸ್ಥಿತರಿದ್ದರು.
ಮುಂದಿನ ಕರೆಗೆ ಸ್ಪೀಕರ್ ಸಾಕಿದ ಕೋಣ? ಮುಂದಿನ ವರ್ಷದ ಕಂಬಳದ ಒಳಗಾಗಿ ಸ್ಪೀಕರ್ ಯು.ಟಿ.ಖಾದರ್ ಅವರ ಹೆಸರಿನಲ್ಲಿ ಕಂಬಳದ ಕೋಣಗಳನ್ನು ಅಣಿಗೊಳಿಸಲು ಯೋಚಿಸಲಾಗಿದೆ. ಈ ಕೋಣಗಳು ಮುಂದಿನ ಸಾಲಿನ ಎಲ್ಲ ಕಂಬಳಗಳಲ್ಲಿ ಭಾಗಿಯಾಗಲಿವೆ. ಈ ಬಗ್ಗೆ ಚಿಂತಿಸಲಾಗಿದ್ದು ಸ್ಪೀಕರ್ ಅವರಿಂದ ಹಸಿರು ನಿಶಾನೆ ದೊರೆತರೆ ಮುಂದಿನ ಕ್ರಮವಹಿಸಲಾಗುವುದು ಎಂದು ಪ್ರಶಾಂತ್ ಕಾಜವ ಮಿತ್ತಕೋಡಿ ಹೇಳಿದರು.
ನರಿಂಗಾನ ಗ್ರಾಮೋತ್ಸವ ಜ.12ರಂದು ಮಧ್ಯಾಹ್ನ 2 ಗಂಟೆಯಿಂದ ನರಿಂಗಾನ ಗ್ರಾಮೋತ್ಸವ ಹಮ್ಮಿಕೊಳ್ಳಲಾಗಿದ್ದು ಕಂಬಳಕ್ಕಾಗಿ ದುಡಿದವರಿಗೆ ಗೌರವ ಸ್ನೇಹ ಸಮ್ಮಿಲನ ಪ್ರತಿಭಾ ಪುರಸ್ಕಾರ ಸಂಗೀತ ರಸಮಂಜರಿ ವಿವಿಧ ಸ್ಪರ್ಧೆಗಳು ನಡೆಯಲಿವೆ ಎಂದು ಯು.ಟಿ.ಖಾದರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.