
ನೆಲ್ಯಾಡಿ (ಉಪ್ಪಿನಂಗಡಿ): ನೆಲ್ಯಾಡಿ ಗ್ರಾಮದ ಕೊಪ್ಪಮಾದೇರಿ ನಿವಾಸಿ ಕೆ.ಸಿ.ವರ್ಗೀಸ್ (73) ಅವರ ತಲೆ ಮತ್ತು ದೇಹದ ಭಾಗಗಳಿಗೆ ಬಲವಾದ ಪೆಟ್ಟು ಬಿದ್ದ ಗಾಯವಾಗಿದ್ದು, ಇದೊಂದು ಕೊಲೆ ಪ್ರಕರಣ ಎಂದು ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ವ್ಯಕ್ತಿಯ ಪುತ್ರನ ಸಹಿತ ಮೂವರನ್ನು ಬಂಧಿಸಿದ್ದಾರೆ. ವರ್ಗೀಸ್ ಪುತ್ರ, ಕಡಬ ತಾಲ್ಲೂಕಿನ ನೆಲ್ಯಾಡಿ ನಿವಾಸಿ ಕೆ.ವಿ. ಥಾಮಸ್ ಯಾನೆ ವಿಲ್ಸನ್ ನೆಲ್ಯಾಡಿ, ಬೆಳ್ತಂಗಡಿ ತಾಲ್ಲೂಕು ಅರಸಿನಮಕ್ಕಿ ನಿವಾಸಿ ಸಿ.ಟಿ.ರಾಜು ಯಾನೆ ವರ್ಗೀಸ್, ಕಡಬ ತಾಲ್ಲೂಕು ನೆಲ್ಯಾಡಿಯ ಚಾಕೊಚ್ಚ ಆರೋಪಿಗಳು.
6 ದಿನಗಳ ಹಿಂದೆ ಘಟನೆ ನಡೆದಿತ್ತು. ಈ ಬಗ್ಗೆ ಕೆ.ವಿ.ಥಾಮಸ್ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಸ್ಥಳದ ಮಹಜರು ನಡೆಸಿದ್ದರು. ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ದೇರಳಕಟ್ಟೆಯ ಕೆ.ಎಸ್.ಹೆಗ್ದೆ ಆಸ್ಪತ್ರೆಯಲ್ಲಿ ಮರಣೊತ್ತರ ಪರೀಕ್ಷೆಯೂ ನಡೆಸಲಾಗಿತ್ತು. ಹಲ್ಲೆ ಮಾಡಿದಾಗ ತಲೆಗೆ ಆಗಿರುವ ಗಾಯದಿಂದ ವರ್ಗೀಸ್ ಮೃತಪಟ್ಟಿರುವುದಾಗಿ ವೈದ್ಯರು ವರದಿ ನೀಡಿದ್ದು, ತನಿಖೆ ಸಂದರ್ಭದಲ್ಲಿ ಇದೊಂದು ಕೊಲೆ ಪ್ರಕರಣವೆಂದು ಕಂಡು ಬಂದಿದೆ. ಅದರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.