ಮಂಗಳೂರು: ಬಂಡಾಯ ಸಾಹಿತಿ, ದಲಿತ ಕವಿ ಡಾ.ಸಿದ್ದಲಿಂಗಯ್ಯ ಅವರ ನಿಧನ ಕನ್ನಡ ಸಾರಸ್ವತ ಲೋಕಕ್ಕೆ ಬಹುದೊಡ್ಡ ನಷ್ಟ ಎಂದು ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಸಂತಾಪ ವ್ಯಕ್ತಪಡಿಸಿದ್ದಾರೆ.
ಗ್ರಾಮಾಂತರ ಪ್ರದೇಶದ ಊರು ಕೇರಿಗಳ ಮುಖವಾಣಿಯಾಗಿ ತಮ್ಮ ಕವಿತೆ ಹಾಗೂ ಗದ್ಯ ಸಾಹಿತ್ಯಗಳಿಂದ ದೀನ- ದಲಿತರನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ಅನುಕರಣೀಯ , ಇವರ ಉದಾತ್ತ ಗುಣವನ್ನು ಮರೆಯುವುದು ಅಸಾಧ್ಯ ಎಂದಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವರೊಂದಿಗೆ ಪ್ರಾಧಿಕಾರದ ಸದಸ್ಯನಾಗಿ ನಿಕಟ ಸಂಪರ್ಕವನ್ನು ಹೊಂದಿದ್ದು ಪ್ರಮುಖವಾಗಿ ಕಾಸರಗೋಡಿನ ಕನ್ನಡಿಗರಿಗೆ , ಕರ್ನಾಟಕದಲ್ಲಿನ ಕನ್ನಡಿಗರಿಗೆ ಲಭಿಸುವ ಸೌಲಭ್ಯಗಳು ಲಭ್ಯವಾಗುವಂತಹ ಅನೇಕ ನಿರ್ಣಯಗಳನ್ನು ಕೈಗೊಂಡಿರುವ ಕ್ರಮ, ಮಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಅಖಿಲ ಭಾರತ ಪುಸ್ತಕ ಮೇಳದ ಯಶಸ್ಸಿನಲ್ಲೂ ಸಿದ್ಧಲಿಂಗಯ್ಯ ನವರ ಕ್ಷಮತೆಯನ್ನು ಕೊಂಡಾಡಿದ್ದಾರೆ ಎಂದಿದ್ದಾರೆ.
ಪ್ರಮುಖರಾದ ಹರಿಕೃಷ್ಣ ಪುನರೂರು, ಡಾ.ಎಂ.ಪ್ರಭಾಕರ ಜೋಶಿ, ನಿತ್ಯಾನಂದ ಕಾರಂತ ಪೊಳಲಿ, ಜಿ.ಕೆ.ಭಟ್ ಸೇರಾಜೆ ಮೊದಲಾದವರೂ ಸಿದ್ಧಲಿಂಗಯ್ಯ ಅವರ ನಿಧನಕ್ಕೆ ನುಡಿನಮನ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.