ಪುತ್ತೂರು: ಸರ್ವೆ ಗ್ರಾಮದ ಗೌರಿ ಹೊಳೆಯಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ.
ಮಂಜೇಶ್ವರ-ಸುಬ್ರಹ್ಮಣ್ಯ ರಸ್ತೆ ಬದಿಯಲ್ಲಿ ಹಾದು ಹೋಗುವ ಗೌರಿ ಹೊಳೆಯ ಮಧ್ಯ ಭಾಗದ ಮರಳಿನ ರಾಶಿಯಲ್ಲಿ ಮೊಸಳೆ ಸೋಮವಾರ ಕಾಣಿಸಿಕೊಂಡಿತ್ತು. ಮೊಸಳೆಯನ್ನು ನೋಡಿರುವ ಸ್ಥಳೀಯರಾದ ಕೇಶವಚಂದ್ರ ಎಂಬುವರು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಮೊಸಳೆಯ ಪೊಟೊ, ವಿಡಿಯೊ ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಗೌರಿ ಹೊಳೆಯ ಒಂದು ಬದಿ ಪುತ್ತೂರು ತಾಲ್ಲೂಕು ವ್ಯಾಪ್ತಿಯಲ್ಲಿದ್ದರೆ, ಮತ್ತೊಂದು ಬದಿ ಕಡಬ ತಾಲ್ಲೂಕು ವ್ಯಾಪ್ತಿಯಲ್ಲಿದೆ. ಕಳೆದ ವರ್ಷವೂ ಡಿಸೆಂಬರ್ನಲ್ಲಿ ಗೌರಿ ಹೊಳೆಯಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ರಸ್ತೆ ಪಕ್ಕದಲ್ಲೇ ಹೊಳೆ ಇರುವುದರಿಂದ ಮೊಸಳೆ ರಸ್ತೆ ಬದಿಗೂ ಬರಬಹುದು ಎಂಬ ಆತಂಕ ಎದುರಾಗಿದೆ.
ಮಾಂಸದ ಅಂಗಡಿ ನಡೆಸುವ ಕೆಲವರು, ಕೆಲವು ಸಮಾರಂಭ ನಡೆಸುವವರು ತ್ಯಾಜ್ಯಗಳನ್ನು ಸೇತುವೆ ಬಳಿ ತಂದು ಗೌರಿ ಹೊಳೆಗೆ ಎಸೆಯುತ್ತಿದ್ದಾರೆ. ಸರ್ವೆಗೆ ಸುಮಾರು 3 ಕಿ.ಮೀ. ದೂರದಲ್ಲಿರುವ ಕುಮಾರಧಾರಾ ನದಿಯಲ್ಲಿ ಹಲವು ಮೊಸಳೆಗಳಿದ್ದು, ಅಲ್ಲಿಂದ ಆಹಾರ ಹುಡುಕಿಕೊಂಡು ಮೊಸಳೆಗಳು ಈ ಭಾಗಕ್ಕೆ ಬರುತ್ತಿವೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೊಸಳೆಯನ್ನು ಅರಣ್ಯ ಇಲಾಖೆಯವರು ಹಿಡಿದು ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.