ಪುತ್ತೂರು: ಕಾಲೇಜಿನ ನಿವೃತ್ತ ಪ್ರಾಂಶುಪಾಲರೊಬ್ಬರ ಮನೆಗೆ ಹೆಲ್ಮೆಟ್ ಧರಿಸಿದ್ದ ವ್ಯಕ್ತಿಗಳಿಬ್ಬರು ಬಂದು ದರೋಡೆಗೆ ಯತ್ನಿಸಿದ ಘಟನೆ ಪುತ್ತೂರು ನಗರದ ಕೊಂಬೆಟ್ಟಿನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ.ವಿ.ನಾರಾಯಣ ಮತ್ತು ವತ್ಸಲಾರಾಜ್ಞಿ ದಂಪತಿಯ ಮನೆಯಲ್ಲಿ ದರೋಡೆಗೆ ಯತ್ನ ನಡೆದಿದೆ.
ಡಿ.17ರಂದು ರಾತ್ರಿ ವೇಳೆ ವತ್ಸಲಾರಾಜ್ಞಿ ಅವರು ಊಟ ಮಾಡಿ ಮನೆಯೊಳಗೆ ಕುಳಿತಿದ್ದ ವೇಳೆ ತೆರೆದಿಟ್ಟಿದ್ದ ಹಿಂಬದಿಯ ಬಾಗಿಲಿನ ಮೂಲಕ ಒಳನುಗ್ಗಿದ ವ್ಯಕ್ತಿಗಳಿಬ್ಬರು ಬಂದು ಅವರ ಕಣ್ಣು ಮತ್ತು ಬಾಯಿಯನ್ನು ಹಿಂದಿನಿಂದ ಮುಚ್ಚಿದ್ದರು. ಆ ವೇಳೆ ವತ್ಸಲರಾಜ್ಞಿ ಹೊರಲಾಡಿ ಕುರ್ಚಿಯಿಂದ ಕೆಳಗೆ ಬಿದ್ದು ಬೊಬ್ಬೆ ಹೊಡೆದಿದ್ದರು. ಈ ವೇಳೆ ಅಲ್ಲಿಗೆ ಬಂದ ಎ.ವಿ.ನಾರಾಯಣ್ ಅವರ ಕಣ್ಣು ಮತ್ತು ಬಾಯಿಯನ್ನು ಮುಚ್ಚಲು ಯತ್ನಿಸಿದ ದುಷ್ಕರ್ಮಿಗಳು ಬಳಿಕ ಮನೆಯ ಹಿಂಬದಿಯ ಬಾಗಿಲ ಮೂಲಕ ಓಡಿ ಹೋಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಯಾವುದೇ ಸ್ವತ್ತು ಕಳವಾಗಿಲ್ಲ ಎಂಬ ಮಾಹಿತಿ ಲಭಿಸಿದೆ. ಎ.ವಿ.ನಾರಾಯಣ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.