ADVERTISEMENT

ಹಿರಿಯ ಯಕ್ಷಗಾನ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ನಿಧನ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 9:50 IST
Last Updated 27 ಸೆಪ್ಟೆಂಬರ್ 2020, 9:50 IST
ಹಿರಿಯ ಯಕ್ಷಗಾನ ಕಲಾವಿದ, ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ
ಹಿರಿಯ ಯಕ್ಷಗಾನ ಕಲಾವಿದ, ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ    

ಮಂಗಳೂರು: ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಹಿರಿಯ ಯಕ್ಷಗಾನ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು (76) ಭಾನುವಾರ ನಿಧನರಾದರು.

ಅವರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಬಂಟ್ವಾಳ ತಾಲ್ಲೂಕಿನ ಕರೋಪಾಡಿ ಬಳಿ ತೆಂಕಬೈಲು ನಿವಾಸಿಯಾಗಿರುವ ಅವರು ತಮ್ಮ ಕಂಚಿನ ಕಂಠದಿಂದ ಯಕ್ಷಗಾನ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದರು. ಸುವಿಖ್ಯಾತ ಭಾಗವತರಾಗಿದ್ದ ದಿ. ಮಾಂಬಾಡಿ ನಾರಾಯಣ ಭಾಗವತರಲ್ಲಿ ಯಕ್ಷಗಾನ ಭಾಗವತಿಕೆಯನ್ನು ಅಭ್ಯಸಿಸಿದ್ದ ಭಾಗವತರು, ಬಜಕ್ಕಳ ಗಣಪತಿ ಭಟ್ಟರಲ್ಲಿ ಶಾಸ್ತ್ರೀಯ ಸಂಗೀತದ ಅಭ್ಯಾಸವನ್ನೂ ಮಾಡಿಕೊಂಡಿದ್ದರು. ತೆಂಕಬೈಲು ಭಾಗವತರು25 ವರ್ಷಗಳ ಕಾಲ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ.

ADVERTISEMENT

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ, ಉಡುಪಿ ಯಕ್ಷಗಾನ ಕಲಾರಂಗ, ಸಂಪಾಜೆ ಡಾ. ಕೀಲಾರು ಗೋಪಾಲ ಕೃಷ್ಣಯ್ಯ ಪ್ರತಿಷ್ಠಾನ ಕೊಡಮಾಡುವ ಗೌರವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಗೆ ಶಾಸ್ತ್ರಿಗಳು ಭಾಜನರಾಗಿದ್ದರು.

ಭಾಗವತಿಕೆ ಮಾತ್ರವಲ್ಲದೆ ಚೆಂಡೆ, ಮದ್ದಳೆ ವಾದನದಲ್ಲೂ ಪರಿಣತಿ ಹೊಂದಿದ್ದ ಭಾಗವತರುಅಪಾರ ಸಂಖ್ಯೆಯ ಶಿಷ್ಯಂದಿರನ್ನು ಹೊಂದಿದ್ದರು.ಸುಮಾರು 10 ವರ್ಷಗಳಿಂದ ಗಡಿನಾಡು ಕಾಸರಗೋಡಿನ ಪೆರ್ಲದಲ್ಲಿರುವ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದಲ್ಲಿ ಹಿಮ್ಮೆಳ ತರಗತಿಯನ್ನೂ ನಡೆಸುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಇತರ ಕೆಲವು ಕಡೆಗಳಲ್ಲಿಯೂ ಹಿಮ್ಮೇಳ ತರಗತಿ ನಡೆಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.