ADVERTISEMENT

ಎಸ್‌ಐಒ ಶೈಕ್ಷಣಿಕ ಅಭಿಯಾನದಲ್ಲಿ ವೈವಿಧ್ಯಮಯ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 16:45 IST
Last Updated 30 ಸೆಪ್ಟೆಂಬರ್ 2022, 16:45 IST
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಫವಾಜ್‌ ಶಾಹಿನ್ ಮಾತನಾಡಿದರು. ಸೈಯದ್ ಅಹಮ್ಮದ್, ಇಬ್ರಾಹಿಂ, ಶೆಹಜಾದ್ ಶಕೀಬ್‌, ನಾಸಿರ್‌, ರಿಜ್ವಾನ್‌ ಇದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಫವಾಜ್‌ ಶಾಹಿನ್ ಮಾತನಾಡಿದರು. ಸೈಯದ್ ಅಹಮ್ಮದ್, ಇಬ್ರಾಹಿಂ, ಶೆಹಜಾದ್ ಶಕೀಬ್‌, ನಾಸಿರ್‌, ರಿಜ್ವಾನ್‌ ಇದ್ದಾರೆ   

ಮಂಗಳೂರು: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ (ಎಸ್‌ಐಒ)ಸ್ಥಾಪನೆಯಾಗಿ 4 ದಶಕಗಳು ತುಂಬಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಹಮ್ಮಿಕೊಂಡಿರುವ ಅಭಿಯಾನದಡಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಫವಾಜ್‌ ಶಾಹಿನ್ ತಿಳಿಸಿದರು.

ನಗರದ ಶಾಂತಿ ಪ್ರಕಾಶನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ’ಒಗ್ಗಟ್ಟನ್ನು ಬಲಪಡಿಸೋಣ, ಮಾನವೀಯತೆಯನ್ನು ಎತ್ತಿ ಹಿಡಿಯೋಣ’ ಎಂಬ ಘೋಷವಾಕ್ಯದಡಿ ವಿದ್ಯಾರ್ಥಿಗಳು ಮತ್ತು ಯುವಜನತೆಯಲ್ಲಿ ಸದ್ಯದ ಶೈಕ್ಷಣಿಕ ಪರಿಸ್ಥಿತಿಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ನವದೆಹಲಿ, ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಈಗ ಕರ್ನಾಟಕಕ್ಕೆ ಪ್ರವೇಶ ಮಾಡಲಾಗಿದೆ ಎಂದು ತಿಳಿಸಿದರು.

‘ಕಡ್ಡಾಯ ಮತ್ತು ಉಚಿತ ಶಿಕ್ಷಣ ಸಂವಿಧಾನದ ಆಶಯವಾಗಿರುವ ದೇಶದಲ್ಲಿ ಈಗ ಅದನ್ನು ವ್ಯಾಪಾರೀಕರಣ ಮಾಡಲಾಗಿದೆ. ಶಿಕ್ಷಣ ಈಗ ಮಾರಾಟದ ಸರಕಾಗಿ ಮಾರ್ಪಟ್ಟಿದೆ. ಸಂವಿಧಾನ ದತ್ತ ಸವಲತ್ತುಗಳನ್ನು ಪಡೆಯುವುದಕ್ಕಾಗಿ ಧ್ವನಿ ಎತ್ತಬೇಕಾದ ಕಾಲ ಸಮೀಪಿಸಿದೆ. ಇಂಥ ಸಂದರ್ಭದಲ್ಲಿ ವಿದ್ಯಾರ್ಥಿ–ಯುವ ಜನತೆಯಲ್ಲಿ ನೈತಿಕ ಮೌಲ್ಯಗಳನ್ನು ತುಂಬುವ ಕಾರ್ಯವನ್ನು ಸಂಘಟನೆ ಮಾಡುತ್ತಿದೆ‘ ಎಂದು ಅವರು ವಿವರಿಸಿದರು.

ADVERTISEMENT

ಎಸ್‌ಐಒ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸೈಯದ್ ಅಹಮ್ಮದ್ ಮಾತನಾಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಸುಧಾರಣೆಗಾಗಿ ಕಾರ್ಯಾಚರಿಸುತ್ತಿರುವ ಸಂಘಟನೆಯು ರಾಷ್ಟ್ರೀಯ ಶಿಕ್ಷಣ ನೀತಿ ಸಿದ್ಧಪಡಿಸುವ ಸಂದರ್ಭದಲ್ಲಿ ವಿಶ್ಲೇಷಣಾತ್ಮಕ ಸಲಹೆಗಳನ್ನು ಕೊಟ್ಟಿದೆ. ಶಿಕ್ಷಣ ಹಕ್ಕಿಗೆ ಸಂಬಂಧಿಸಿ ಶಾಲೆಗಳಲ್ಲಿ ಸಮೀಕ್ಷೆ ನಡೆಸಿ ಬೇಡಿಕೆಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಇಬ್ರಾಹಿಂ, ರಾಜ್ಯ ಘಟಕದ ಕಾರ್ಯದರ್ಶಿ ಶೆಹಜಾದ್ ಶಕೀಬ್‌, ಕಾರ್ಯದರ್ಶಿ ನಾಸಿರ್‌, ಸಲಹಾ ಸಮಿತಿ ಸದಸ್ಯ ರಿಜ್ವಾನ್‌ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.