ಪುತ್ತೂರು: ಇ.ಡಿ. ಬಂಧನದಲ್ಲಿರುವ ರಾಜ್ಯದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ನ್ಯಾಯ ಸಿಗುವಂತೆ ಹಾಗೂ ಅವರಿಗೆ ಉತ್ತಮ ಆರೋಗ್ಯವನ್ನು ಕರುಣಿಸುವಂತೆ ಪ್ರಾರ್ಥಿಸಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರ ನೇತೃತ್ವದಲ್ಲಿ ಅಂಗಾರಕ ಸಂಕಷ್ಟಿ ಪ್ರಯುಕ್ತ ಮಂಗಳವಾರ ಇಲ್ಲಿಯ ಮಹಾಲಿಂಗೇಶ್ವರ ದೇವಳದ ಬಾಲಗಣಪತಿ ಗುಡಿಯ ಬಳಿ ವಿಶೇಷ 12 ಕಾಯಿ ಗಣಪತಿ ಹವನ ನಡೆಯಿತು.
ಬನ್ನೂರು ರೈತ ಸೇವಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮತ್ತು ರಾಜ್ಯ ಧಾಮರ್ಮಿಕ ಪರಿಷತ್ ಮಾಜಿ ಸದಸ್ಯ ಎನ್.ಕೆ.ಜಗನ್ನಿವಾಸ ರಾವ್ ಸಂಕಲ್ಪ ಮಾಡಿದರು. ಹೋಮದ ಪೂರ್ಣಾಹುತಿಯ ವೇಳೆ ಹೇಮನಾಥ ಶೆಟ್ಟಿ ಕಾವು ಮತ್ತು ಅವರ ಪತ್ನಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಪ್ರಾರ್ಥಿಸಿಕೊಂಡರು.
ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾ ಸಮಿತಿ ಅಧ್ಯಕ್ಷ ಯು.ಲೋಕೇಶ್ ಹೆಗ್ಡೆ, ಕಾರ್ಯದರ್ಶಿ ಸುಭಾಷ್ ರೈ ಬೆಳ್ಳಿಪ್ಪಾಡಿ, ವಕೀಲ ಚಿದಾನಂದ ಬೈಲಾಡಿ,ಕೊಂಕಣಿ ಅಕಾಡೆಮಿ ಸದಸ್ಯ ದಾಮೋದರ್ ಭಂಡಾರ್ಕರ್, ತಾಲ್ಲೂಕು ಪಂಚಾಯಿತಿ ಸದಸ್ಯ ಪರಮೇಶ್ವರ ಭಂಡಾರಿ, ಪ್ರಮುಖರಾದ ರತ್ನಾಕರ ನಾಯ್ಕ್, ರವಿಪ್ರಸಾದ್ ಶೆಟ್ಟಿ, ಸ್ವರ್ಣಲತಾ ಹೆಗ್ಡೆ, ಮುಕೇಶ್ ಕೆಮ್ಮಿಂಜೆ ಉಪಸ್ಥಿತರಿದ್ದರು.
ನ್ಯಾಯ ಸಿಗಲಿ: ರಾಜ್ಯಕಾಂಗ್ರೆಸ್ ಪಕ್ಷದ ಶಕ್ತಿಯಾಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಗುರಿಯಾಗಿಸಿ ಕೇಂದ್ರದ ಅಧೀನದಲ್ಲಿರುವ ಇ.ಡಿ. ಸಂಸ್ಥೆಯ ಮೂಲಕ ಬಂಧಿಸಿದ್ದಾರೆ. ಅವರಿಗೆ ನ್ಯಾಯ ಮತ್ತು ಆರೋಗ್ಯವನ್ನು ದೇವರು ಕರುಣಿಸಲಿ ಎಂದು ಗಣಪತಿ ಹವನ ಸೇವೆ ಮಾಡಿದ್ದೇವೆ ಎಂದು ಹೇಮನಾಥ ಶೆಟ್ಟಿ ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.