ಮಂಗಳೂರು: ಕೋವಿಡ್ ತಪಾಸಣಾ ವರದಿಯ ಅಧಿಕೃತತೆಯ ಅನುಮಾನದಿಂದ ಗಲ್ಫ್ ರಾಷ್ಟ್ರಕ್ಕೆ ಶುಕ್ರವಾರ ತಡರಾತ್ರಿ ಪ್ರಯಾಣಿಸಬೇಕಿದ್ದ ಶಿವಮೊಗ್ಗದ ಮಹಿಳಾ ಪ್ರಯಾಣಿಕರೊಬ್ಬರಿಗೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಅನುಮತಿ ನಿರಾಕರಿಸಲಾಗಿದೆ.
ಶಿವಮೊಗ್ಗದ ಚಾಂದ್ ಬೇಗಂ ಅವರು ಶಿವಮೊಗ್ಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಇದೇ 18ರಂದು ಕೋವಿಡ್ ತಪಾಸಣೆ ಮಾಡಿಸಿದ್ದರು. 19ರಂದು ವರದಿ ಕೈ ಸೇರಿತ್ತು. ಗಲ್ಫ್ ರಾಷ್ಟ್ರಕ್ಕೆ ತೆರಳಲು 20ರಂದು ರಾತ್ರಿ 11.30ರ ವೇಳೆಗೆ ವರದಿಯೊಂದಿಗೆ ಅವರು ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆದರೆ ಪ್ರಯಾಣಿಕರ ತಪಾಸಣೆಯ ಸಂದರ್ಭದಲ್ಲಿ ಶಿವಮೊಗ್ಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಿಂದ ನೀಡಲಾದ ವರದಿಯಲ್ಲಿ ಶಿವಮೊಗ್ಗದ ಪದಗಳು ಎರಡು ಕಡೆಗಳಲ್ಲಿ ವಿಭಿನ್ನವಾಗಿದೆ ಎಂದು ಹೇಳಿ ವರದಿಯನ್ನು ತಿರಸ್ಕರಿಸಲಾಗಿದೆ ಎಂದು ಪ್ರಯಾಣಿಕೆಯ ಸಂಬಂಧಿಕರು ದೂರಿದ್ದಾರೆ.
‘ಶುಕ್ರವಾರ ತಡರಾತ್ರಿ 3 ಗಂಟೆಯವರೆಗೂ ವಿಮಾನ ಸಂಸ್ಥೆಯ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದೇ ಹಿಂದಿರುಗಬೇಕಾಯಿತು. ಸಂಬಂಧಿಕರು ಸಂಬಂಧಪಟ್ಟ ಪ್ರಯೋಗಾಲಯದ ಹಿರಿಯ ಅಧಿಕಾರಿಯಿಂದಲೇ ಸ್ಪಷ್ಟಪಡಿಸಿದರೂ, ಸ್ಪೈಸ್ ಜೆಟ್ ಅಧಿಕಾರಿಗಳು ಪ್ರಯಾಣಕ್ಕೆ ಅವಕಾಶ ನೀಡಲಿಲ್ಲ. ಶನಿವಾರ ಮತ್ತೆ ಮಂಗಳೂರಿನ ಆಸ್ಪತ್ರೆಯಲ್ಲಿ ಕೋವಿಡ್ ತಪಾಸಣೆಗೆ ಒಳಗಾಗಬೇಕಾಯಿತು’ ಎಂದು ಅವರ ಸಹೋದರ ಝಾಕಿರ್ ಹುಸೇನ್ ಹೇಳಿದ್ದಾರೆ.
‘ಯಾವ ಕಾರಣಕ್ಕಾಗಿ ಮಹಿಳೆಯ ಪ್ರಯಾಣವನ್ನು ತಡೆಹಿಡಿಯಲಾಗಿತ್ತು ಎಂಬುದು ತಿಳಿದಿಲ್ಲ. ಕೋವಿಡ್-19 ಹಿನ್ನೆಲೆಯಲ್ಲಿ ವಿದೇಶ ಪ್ರಯಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ವಿದೇಶದ ಹಲವಾರು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹಾಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ ಪಾಳಿಯಲ್ಲಿದ್ದ ಅಧಿಕಾರಿಯಿಂದ ಮಾಹಿತಿ ಪಡೆಯಲಾಗುವುದು’ ಎಂದು ಸ್ಪೈಸ್ ಜೆಟ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಸಂತೋಷ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.