
ಮೂಡುಬಿದಿರೆ: ಭಾರತೀಯ ನ್ಯಾಯ ಸಂಹಿತೆಯಲ್ಲಿ ಡಿಜಿಟಲ್ ಅರೆಸ್ಟ್ ಎಂಬ ಪರಿಕಲ್ಪನೆಯೆ ಇಲ್ಲ. ಆದರು ಈ ಹೆಸರಿನಲ್ಲಿ ವಂಚನೆಯ ಜಾಲ ಸಕ್ರಿಯವಾಗಿದೆ. ಇಂತವರ ಬಗ್ಗೆ ಸಾರ್ವಜನಿಕರು ಧೈರ್ಯದಿಂದ ಮುಂದೆ ಬಂದು ಪೊಲೀಸರಿಗೆ ದೂರು ನೀಡಬೇಕು ಎಂದು ಮೂಡುಬಿದಿರೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರತಿಭಾ ಕೆ.ಸಿ ಹೇಳಿದರು.
ಬನ್ನಡ್ಕ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಮಂಗಳವಾರ ಪ್ರಜಾವಾಣಿ ಸಹಯೋಗದಲ್ಲಿ ನಡೆದ ‘ಅಪರಾಧ ತಡೆ ಜಾಗೃತಿ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೊಬೈಲ್ಗೆ ಬರುವ ಅಪರಿಚಿತರ ಒಟಿಪಿಗಳಿಗೆ, ಅನುಮಾನಾಸ್ಪದ ಮೆಸೇಜ್ ಲಿಂಕ್ಗಳಿಗೆ ಪ್ರತಿಕ್ರಿಯಿಸಬೇಡಿ. ಮನಿ ಲೋನ್ ಆಪ್ಗಳಿಂದ ಸಾಲ ಪಡೆಯುವುದು ಕೂಡ ಅಪಾಯ. ಷೇರು ಮಾರುಕಟ್ಟೆಗೆ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ, ವರ್ಕ್ ಫ್ರಂ ಹೋಮ್ನಿಂದ ಮನೆಯಲ್ಲಿದ್ದುಕೊಂಡೆ ಸಂಪಾದನೆ ಎಂಬುದು ಆನ್ಲೈನ್ ಮೋಸದ ಬೇರೆ ಬೇರೆ ಮಾರ್ಗಗಳು. ಈ ಬಗ್ಗೆ ವಿದ್ಯಾರ್ಥಿಗಳು, ಸಾರ್ವಜನಿಕರು ಎಚ್ಚರದಿಂದ ಇರಬೇಕು. ಇಂತಹ ಮೋಸದ ಸಂದೇಶಗಳು ನಿಮ್ಮ ಮೊಬೈಲ್ಗೆ ಬಂದರೆ ನಿಮ್ಮ ಹೆತ್ತವರಿಗೆ, ಸ್ನೇಹಿತರಿಗೆ ತಿಳಿಸಿ ಅವರನ್ನು ಜಾಗೃತಗೊಳಿಸಿ ಎಂದರು.
ವಿದ್ಯಾರ್ಥಿಗಳ ಬದುಕು ಹಾಳು ಮಾಡುವ ಡ್ರಗ್ಸ್, ಗಾಂಜಾ ಇತರ ಮಾದಕ ವಸ್ತುಗಳ ಸೇವನೆಯಿಂದ ದೂರ ಇರಬೇಕು. ಇಂತಹ ಪ್ರಕರಣಗಳಲ್ಲಿ ಸಿಕ್ಕಿ ಬಿದ್ದರೆ ನಿಮ್ಮ ವಿರುದ್ಧವು ಪ್ರಕರಣ ದಾಖಲಾಗುತ್ತದೆ. ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಮಾರಾಟ ಮಾಡುವವರ ಬಗ್ಗೆ ಮಾಹಿತಿ ಇದ್ದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ನಿಮ್ಮ ಹೆಸರನ್ನು ಗೌಪ್ಯವಾಗಿ ಇರಿಸಲಾಗುವುದು ಎಂದರು.
ಬನ್ನಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ದಯಾನಂದ ಪೈ ಮಾತನಾಡಿ, ಡ್ರಗ್ಸ್, ಗಾಂಜಾ ಮಾರಾಟಗಾರರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಪತ್ರಿಕೆಯ ಹಿರಿಯ ವರದಿಗಾರ ಪ್ರವೀಣ್ ಪಾಡಿಗಾರ್, ಕಾಲೇಜಿನ ಕ್ರೀಡಾ ಕಾರ್ಯದರ್ಶಿ ಸಂಗೀತಾ, ಎನ್ಎಸ್ಎಸ್ ಕಾರ್ಯದರ್ಶಿಗಳಾದ ದೀಪ್ತಿ ಸುರೇಶ್ ಪೂಜಾರಿ, ರಾಜೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಕನ್ಯಾ ನಿರೂಪಿಸಿದರು. ಪತ್ರಕರ್ತ ಪ್ರಸನ್ನ ಹೆಗ್ಡೆ ಸ್ವಾಗತಿಸಿದರು. ಉಪನ್ಯಾಸಕಿ ಆಶಾ ಶಾಲೆಟ್ ಡಿಸೋಜ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.