ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ನೇತ್ರಾವತಿ ವಲಯದ ಜಂಟಿ ಆಶ್ರಯದಲ್ಲಿ ಯೋಗ ಕಾರ್ಯಕ್ರಮವು ಒಕ್ಕೂಟದ ತರಬೇತಿ ಕೇಂದ್ರದಲ್ಲಿ ಈಚೆಗೆ ನಡೆಯಿತು.
ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಯೋಗವನ್ನು ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಬಾರದು, ನಿತ್ಯಜೀನವದಲ್ಲಿ ಅಳವಡಿಸಿಕೊಳ್ಳಬೇಕು. ಅಧಿಕಾರಿಗಳು ಮತ್ತು ನೌಕರರು ಯೋಗವನ್ನು ಅಭ್ಯಾಸ ಮಾಡಿದರೆ ಮಾನಸಿಕ ಒತ್ತಡ ಮತ್ತು ಆರೋಗ್ಯದ ಸಮಸ್ಯೆಗಳಿಂದ ಮುಕ್ತರಾಗಬಹುದು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ ಮಾತನಾಡಿ ಯಾಂತ್ರಿಕ ಜೀವನದಲ್ಲಿ ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮಗಳು ಉಂಟಾಗುತ್ತಿದ್ದು ಯೋಗವು ದೇಹ, ಮಿದುಳು ಮತ್ತು ಆತ್ಮದ ನಡುವಿನ ಸಂಪರ್ಕವನ್ನು ನಿಯಂತ್ರಿಸಲು ನೆರವಾಗುತ್ತದೆ ನಿತ್ಯವೂ ಆಸನ ಮತ್ತು ಪ್ರಾಣಯಾಮ ಮಾಡುವುದರಿಂದ ಮನಸ್ಸಿಗೆ ಉಲ್ಲಾಸ ಮತ್ತು ಉತ್ಸಾಹ ದೊರೆಯುತ್ತದೆ ಎಂದರು.
ನಂತರ ಎಸ್.ಪಿ.ವೈ.ಎಸ್.ಎಸ್. ಸಂಸ್ಥೆಯ ನುರಿತ ಯೋಗ ಶಿಕ್ಷಕರು ಶಿಬಿರಾರ್ಥಿಗಳಿಗೆ ಆಸನಗಳನ್ನು ಕಲಿಸಿದರು. ಹಾಲು ಮತ್ತು ಹಾಲಿನ ಉತ್ಪನ್ನಗಳ ಬಗ್ಗೆ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ರವಿರಾಜ ಉಡುಪ ಮಾಹಿತಿ ನೀಡಿದರು. ನೋಡಲ್ ಅಧಿಕಾರಿ ಗೀತಾ ಶೆಟ್ಟಿ, ಎಸ್.ಪಿ.ವೈ.ಎಸ್.ಎಸ್.ಸಂಸ್ಥೆಯ ಶಿಕ್ಷಕ ಈಶ್ವರ, ವೇಣುಗೋಪಾಲ, ಗುರುರಾಜ ಉಪಸ್ಥಿತರಿದ್ದರು. ನಿತ್ಯಾನಂದ ಭಕ್ತ ಸ್ವಾಗತಿಸಿದರು. ಶಕುಂತಲ ಪ್ರಾರ್ಥಿಸಿದರು. ರತ್ನಾ ವಂದಿಸಿದರು. ಎಂ.ರವಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.