ದಾವಣಗೆರೆ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕೇಂದ್ರಕ್ಕೆ ಶಿಫಾರಸು ಮಾಡಬಾರದು ಎಂದು ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆಯ ರಾಜ್ಯ ಸಂಚಾಲಕ ವೈ. ಕೊಟ್ರೇಶ್ ಒತ್ತಾಯಿಸಿದರು.
ಪರಿಶಿಷ್ಟ ಜಾತಿಯ ಶೇ 15ರಷ್ಟು ಒಳಮೀಸಲಾತಿಯಲ್ಲಿ ಎಡಗೈಗೆ ಶೇ 6, ಬಲಗೈಗೆ ಶೇ 5 ಸ್ಪಶ್ಯರಿಗೆ, ಶೇ 3 ಇತರರಿಗೆ ಶೇ 1ನ್ನು ವರ್ಗೀಕರಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಈ ಮೀಸಲಾತಿ ವರ್ಗೀಕರಣದಲ್ಲಿ ಬರುವ ಜಾತಿಗಳು ಯಾವುವು? ಆಯಾ ಜಾತಿಯ ಜನಸಂಖ್ಯೆ ಎಷ್ಟು? ಈ ಬಗ್ಗೆ ಸ್ಪಷ್ಟ ಮಾಹಿತಿ ಕಲೆಹಾಕುವಲ್ಲಿ ಆಯೋಗವು ಎಡವಿದೆ. ಈ ವರದಿಯನ್ನು ಕೆಲವು ಶಕ್ತಿಗಳು ವ್ಯವಸ್ಥಿತವಾಗಿ ಬರೆಸಿದಂತಿದೆ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ರಾಜ್ಯದಲ್ಲಿ ಭೋವಿ (ವಡ್ಡರ) ಸಮಾಜವು ಶೇ 90ರಷ್ಟು ಆರ್ಥಿಕವಾಗಿ ಕಡುಬಡತನ ಹೊಂದಿದೆ. ಈ ಸಮುದಾಯದ ಜನರು ಗುಡ್ಡಗಾಡುಗಳಲ್ಲಿ ಮಣ್ಣು ಅಗೆಯುವ, ಕಲ್ಲು ಒಡೆದು, ಮಹಾನಗರಗಳಲ್ಲಿ ಶೌಚಾಲಯ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅನೇಕ ಕಡೆ ಅವರನ್ನು ಅಸ್ಪಶ್ಯರಂತೆ ನೋಡಲಾಗುತ್ತಿದೆ. ಲಕ್ಷಾಂತರ ಕುಟುಂಬಗಳು ಮೂಲ ಸೌಲಭ್ಯದಿಂದ ವಂಚಿತವಾಗಿವೆ. ಅನೇಕರು ಅನಕ್ಷರಸ್ಥರಾಗಿದ್ದಾರೆ. ಆದ್ದರಿಂದ ಈ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ವರದಿ ಸಿದ್ಧಪಡಿಸಲು ಯಾವ ಮಾನದಂಡ ಅನುಸರಿಸಲಾಗಿದೆ ಎಂದು ತಿಳಿದಿಲ್ಲ ಎಂದರು.
ಇಂಥ ವರದಿಯ ಆಧಾರದ ಮೇಲೆ ಸಮುದಾಯದ ಭಾವನೆಗಳನ್ನು ಕೆರಳಿಸಲು ಹೋಗಬಾರದು. ಈ ವರದಿಯನ್ನು ತಿರಸ್ಕರಿಸಬೇಕು. ರಾಜ್ಯದ ಏಕತೆ, ಸಮಗ್ರ ಅಭಿವೃದ್ಧಿಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ಅವರು ಮನವಿ ಮಾಡಿದರು.
ರಾಜ್ಯ ಸಂಘಟ
ನಾ ಕಾರ್ಯದರ್ಶಿ ಅಶೋಕ ಒಡೆಯರ್, ಬೇವಿನಹಳ್ಳಿ ಪ್ರೇಮ್ಕುಮಾರ್, ಭಗವಾನ್, ಕೆ. ರಾಜಪ್ಪ, ಮಹಾದೇವಿ, ಸುಬ್ರಮಣಿ ಮಾಲೂರ, ಜಯಪ್ರಕಾಶ್ ಬದಾಮಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.