ADVERTISEMENT

ಬಿಜೆಪಿ ಎಂದರೆ ಜನರಿಗೆ ಜುಗುಪ್ಸೆ

ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 3:41 IST
Last Updated 4 ಡಿಸೆಂಬರ್ 2021, 3:41 IST
ಹೊನ್ನಾಳಿಯಲ್ಲಿ ವಿಧಾನಪರಿಷತ್‌ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನಕುಮಾರ್ ಪರ ಮುಖಂಡರಾದ ಮಧು ಬಂಗಾರಪ್ಪ, ಎಂ.ಡಿ. ಲಕ್ಷ್ಮೀನಾರಾಯಣ ಅವರು ಮತಯಾಚಿಸಿದರು.
ಹೊನ್ನಾಳಿಯಲ್ಲಿ ವಿಧಾನಪರಿಷತ್‌ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನಕುಮಾರ್ ಪರ ಮುಖಂಡರಾದ ಮಧು ಬಂಗಾರಪ್ಪ, ಎಂ.ಡಿ. ಲಕ್ಷ್ಮೀನಾರಾಯಣ ಅವರು ಮತಯಾಚಿಸಿದರು.   

ಹೊನ್ನಾಳಿ: ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಬಿಜೆಪಿ ಎಂದರೆ ಜುಗುಪ್ಸೆ ಬಂದಿದೆ. ಆ ಜುಗುಪ್ಸೆ ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತವಾಗಿ ಪರಿವರ್ತನೆಯಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಹೇಳಿದರು.

ಶುಕ್ರವಾರ ನಗರದಲ್ಲಿ ಶಿವಮೊಗ್ಗ–ದಾವಣಗೆರೆ ವಿಧಾನಪರಿಷತ್‌ ಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನಕುಮಾರ್ ಅವರ ಪರವಾಗಿ ಮತಯಾಚಿಸಿ ಮಾತನಾಡಿದರು.

‘ಬಿಜೆಪಿ ಸರ್ಕಾರ ಬಂದು ಮೂರೂವರೆ ವರ್ಷ ಕಳೆದರೂ ಒಂದೇ ಒಂದು ಮನೆ ನೀಡಿಲ್ಲ, ಮಾಧ್ಯಮಗಳಲ್ಲಿ ಕೇವಲ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ. ಪ್ರಧಾನಿ ಮೋದಿ ಈ ಪ್ರಚಾರದಿಂದಲೇ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದರು.

ADVERTISEMENT

‘ಗ್ರಾಮ ಪಂಚಾಯಿತಿಗಳಿಗೆ ನಯಾಪೈಸೆ ಅನುದಾನವನ್ನು ನೀಡದ ಬಿಜೆಪಿಯವರಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ. ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮಾಜಿ ಶಾಸಕ ಎಂ.ಡಿ. ಲಕ್ಷ್ಮಿನಾರಾಯಣ್ ಮಾತನಾಡಿ, ‘15ನೇ ಹಣಕಾಸು ಹಾಗೂ ನರೇಗಾಯೋಜನೆಗಳಲ್ಲಿ ಕೇವಲ ಕ್ರಿಯಾಯೋಜನೆ ಮಾತ್ರ ತಯಾರಿಸಲಾಗಿದೆ. ಆದರೆ ಈವರೆಗೆ ಅದಕ್ಕೆ ಮಂಜೂರಾತಿ ಕೊಟ್ಟಿಲ್ಲ. ಒಂದು ಬಿಡಿಗಾಸು ಅನುದಾನ ಬಿಡುಗಡೆಯಾಗಿಲ್ಲ’ ಎಂದು ದೂರಿದರು.

‘ಸಚಿವ ಕೆ.ಎಸ್. ಈಶ್ವರಪ್ಪ ಅವರು ಜಾತಿ ಜನಗಣತಿ ವರದಿ ಕುರಿತು ಅದು ರದ್ದಿ ಪೇಪರ್‌ಗೆ ಸಮ. ಅದಕ್ಕೆ ಸಹಿ ಇಲ್ಲ. ಯಾವುದೇ ಬೆಲೆ ಎಲ್ಲ ಎಂದು ದೂರಿದ್ದಾರೆ. ಇದರಿಂದ ಹಿಂದುಳಿದ ವರ್ಗದವರನ್ನು ಅವಮಾನಿಸಿದ್ದಾರೆ’ ಎಂದರು.

ಮಾಜಿ ಸಚಿವ ಡಿ.ಜಿ. ಶಾಂತನಗೌಡ ಮಾತನಾಡಿ, ‘ಮೂರುವರೆ ವರ್ಷ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಗಂಗಾ ಕಲ್ಯಾಣ ಯೋಜನೆಯಡಿ ಒಂದೇ ಒಂದು ಕೊಳವೆಬಾವಿ ಕೊರೆಸಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರಿಗೆ ಸಂಭಾವನೆ ನೀಡಿಲ್ಲ’ ಎಂದು ದೂರಿದರು.

ವಿಧಾನಪರಿಷತ್‌ ಮಾಜಿ ಸದಸ್ಯ ಜಬ್ಬಾರ್ ಸಾಬ್ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಹಿರಿಯ ಮುಖಂಡ ಬಿ. ಸಿದ್ದಪ್ಪ, ಎಚ್.ಎ. ಉಮಾಪತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಎ. ಗದ್ದಿಗೇಶ್, ಸಣ್ಣಕ್ಕಿ ಬಸವನಗೌಡ, ನ್ಯಾಮತಿಯ ವಾಗೀಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ. ರಮೇಶ್, ಎಚ್.ಬಿ. ಶಿವಯೋಗಿ, ರಾಜ್ಯ ಯುವ ಕಾಂಗ್ರೆಸ್ ವಕ್ತಾರ ದರ್ಶನ್ ಬಳ್ಳೇಶ್ವರ್, ಆರ್. ನಾಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.