
ದಾವಣಗೆರೆ: ಖಾಕಿ ಬಟ್ಟೆ ತೊಟ್ಟು, ತಲೆಗೆ ಟೋಪಿ ಹಾಕಿಕೊಂಡು, ಕೈಯಲ್ಲಿ ದಂಡ ಹಿಡಿದು ಪುಟ್ಟ ಹೆಜ್ಜೆ ಇಡುತ್ತ ಜಿಲ್ಲಾ ಪೊಲೀಸ್ ಭವನಕ್ಕೆ ಅಡಿಯಿಟ್ಟ ಮೂರೂವರೆ ವರ್ಷದ ಬಾಲಕನಿಗೆ ಪೊಲೀಸರು ಸೆಲ್ಯೂಟ್ ಹೊಡೆದರು. ಹೂಗುಚ್ಚ ನೀಡಿ ಆತ್ಮೀಯವಾಗಿ ಆಹ್ವಾನ ನೀಡಿದರು. ಬಾಲಕ ಪೊಲೀಸ್ ವರಿಷ್ಠಾಧಿಕಾರಿ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಪಾಲಕರ ಕಣ್ಣಂಚಲ್ಲಿ ನೀರು ಜಿನುಗಿತು.
ಕ್ಯಾನ್ಸರ್ ಪೀಡಿತ ಬಾಲಕನೊಬ್ಬ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು. ಹೊನ್ನಾಳಿ ತಾಲ್ಲೂಕಿನ ಹೊಸಹಳ್ಳಿಯ ಬಾಲಕನನ್ನು ಪೊಲೀಸ್ ಅಧಿಕಾರಿಯಾಗಿ ಕಾಣಬೇಕು ಎಂಬ ಪಾಲಕರ ಆಸೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್ ಅವರು ಸೋಮವಾರ ಸಂಜೆ ನೆರವೇರಿಸಿದರು.
ಮೂರೂವರೆ ವರ್ಷದ ಬಾಲಕ ಎರಡು ವರ್ಷಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದಾನೆ. ಪುತ್ರನನ್ನು ಪೊಲೀಸ್ ಅಧಿಕಾರಿಯಾಗಿ ರೂಪಿಸಬೇಕು ಎಂದು ಪಾಲಕರು ಕಟ್ಟಿಕೊಂಡಿದ್ದ ಕನಸು ಇದರಿಂದ ಕಮರಿ ಹೋಗಿದೆ. ಈ ವಿಚಾರ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್ ಗಮನಕ್ಕೆ ಬಂದಿದೆ. ಪಾಲಕರನ್ನು ಕಚೇರಿಗೆ ಆಹ್ವಾನಿಸಿದ ಅವರು, ಬಾಲಕ ಒಂದು ಗಂಟೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟರು.
ಕಚೇರಿಗೆ ಆಗಮಿಸಿದ ಬಾಲಕನಿಗೆ ಶೇಖರ್ ಹೂಗುಚ್ಚ ನೀಡಿ ಸ್ವಾಗತಿಸಿದರು. ಕೈಯಲ್ಲಿ ದಂಡ ಕೊಟ್ಟು, ಕುರ್ಚಿಯಲ್ಲಿ ಕೂರಿಸಿದರು. ಬಾಲಕನೊಂದಿಗೆ ಕೆಲಹೊತ್ತು ಪೊಲೀಸರು ಕಾಲಕಳೆದು ಕುಟುಂಬದ ಸದಸ್ಯರಿಗೆ ಧೈರ್ಯತುಂಬುವ ಕೆಲಸ ಮಾಡಿದರು.
‘ಪುತ್ರನನ್ನು ಪೊಲೀಸ್ ಅಧಿಕಾರಿ ಮಾಡಬೇಕು ಎಂಬ ಕನಸು ಕಟ್ಟಿಕೊಂಡಿದ್ದೆ. ಒಂದೂವರೆ ವರ್ಷದವನಿದ್ದಾಗ ಆಗಾಗ ಜ್ವರ ಬರುತ್ತಿತ್ತು. ವೈದ್ಯಕೀಯ ಪರೀಕ್ಷೆ ನಡೆಸಿದಾಗ ಕ್ಯಾನ್ಸರ್ ಎಂಬುದು ಖಚಿತವಾಯಿತು. ಮಣಿಪಾಲದಲ್ಲಿ 9 ತಿಂಗಳು ಚಿಕಿತ್ಸೆ ಕೊಡಿಸಿದ್ದೇವೆ. ಕುಟುಂಬದ ಅಪೇಕ್ಷೆಯನ್ನು ಪೊಲೀಸ್ ವರಿಷ್ಠಾಧಿಕಾರಿ ನೆರವೇರಿಸಿದ್ದಾರೆ’ ಎಂದು ಬಾಲಕನ ತಂದೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.