ಚನ್ನಗಿರಿ: ತಾಲ್ಲೂಕಿನಲ್ಲಿ ಒಂದು ವಾರದಿಂದ ಅಡಿಕೆ ಕೊಯ್ಲು ಕಾರ್ಯ ಭರದಿಂದ ಸಾಗಿದೆ.
39 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ಅಡಿಕೆಯನ್ನು ಬೆಳೆಯಲಾಗುತ್ತಿದೆ. ಆಗಸ್ಟ್ ಮೊದಲ ವಾರದಿಂದ ಬೆಳೆಗಾರರು ಅಡಿಕೆ ಕೊಯ್ಲನ್ನು ಆರಂಭಿಸಿದ್ದಾರೆ. ಅಕ್ಟೋಬರ್ ವರೆಗೂ ಈ ಕಾರ್ಯ ನಿರಂತರವಾಗಿ ನಡೆಯುತ್ತದೆ.
ಪ್ರತಿ ವರ್ಷ ಅಡಿಕೆ ಬೆಳೆಗಾರರು ಅಡಿಕೆಯನ್ನು ಖೇಣಿದಾರರಿಗೆ ಖೇಣಿಯನ್ನು ನೀಡುತ್ತಿದ್ದರು. ಆದರೆ, ಈ ಬಾರಿ ಅಡಿಕೆ ಬೆಳೆಗಾರರು ಹಾಗೂ ಖೇಣಿದಾರರ ನಡುವೆ ಗೊಂದಲ ಉಂಟಾಗಿದ್ದು, ಬಹುತೇಕ ಅಡಿಕೆ ಬೆಳೆಗಾರರು ಹಸಿ ಅಡಿಕೆ ಕಾಯಿಯನ್ನು ಮಾರಾಟ ಮಾಡುತ್ತಿದ್ದಾರೆ. ಹಸಿ ಅಡಿಕೆ ಕಾಯಿ ಪ್ರತಿ ಕ್ವಿಂಟಲ್ಗೆ ₹ 6,000 ದರ ಇದೆ. ಅಡಿಕೆ ತೋಟದಲ್ಲಿ ಪ್ರತಿ ಎಕರೆಗೆ 6 ರಿಂದ 10 ಕ್ವಿಂಟಲ್ ಸಂಸ್ಕರಿಸಿದ ಒಣ ಅಡಿಕೆ ಲಭ್ಯವಾಗುತ್ತದೆ.
ಹಗಲಿನ ವೇಳೆ ಬಿಸಿಲು ಹೆಚ್ಚಾಗಿರುವುದು ಬೇಯಿಸಿದ ಅಡಿಕೆಯನ್ನು ಒಣಗಿಸಲು ವಾತಾವರಣ ಅನುಕೂಲಕರವಾಗಿದೆ. ಜತೆಗೆ ಬೆಲೆಯೂ ಉತ್ತಮವಾಗಿರುವುದರಿಂದ ಅಡಿಕೆ ಕೊಯ್ಲು ಕಾರ್ಯ ಬಿರುಸಿನಿಂದ ನಡೆಯುತ್ತಿದೆ.
ಪ್ರಸ್ತುತ ರಾಶಿ ಅಡಿಕೆ ಕ್ವಿಂಟಲ್ಗೆ ಕನಿಷ್ಠ ₹52,779 ಇದ್ದು, ಗರಿಷ್ಠ ₹58,700 ದರ ಇದೆ. ಅಡಿಕೆ ಕೊಯ್ಲು ಮಾಡಲು ಕಾರ್ಮಿಕರಿಗೂ ಹೆಚ್ಚಿನ ಬೇಡಿಕೆ ಉಂಟಾಗಿದೆ.
‘ಕಳೆದ ವರ್ಷಕ್ಕಿಂತ ಈ ಬಾರಿ ಇಳುವರಿ ಹೆಚ್ಚಾಗಿದೆ. ಕಳೆದ ವರ್ಷ ಪ್ರತಿ ಎಕರೆಗೆ 5ರಿಂದ 6 ಕ್ವಿಂಟಲ್ ಇಳುವರಿ ಬಂದಿತ್ತು. ಈ ಬಾರಿ ಉತ್ತಮವಾಗಿ ಮಳೆಯಾದ ಪರಿಣಾಮ ಪ್ರತಿ ಎಕರೆಗೆ 6 ರಿಂದ 10 ಕ್ವಿಂಟಲ್ ಇಳುವರಿ ಬಂದಿದೆ. ಜತೆಗೆ ಅಡಿಕೆ ದರವೂ ಉತ್ತಮವಾಗಿದೆ. ಹೀಗಾಗಿ ಅಡಿಕೆ ಕೊಯ್ಲನ್ನು ಬೇಗ ಮುಗಿಸಿ ಅಡಿಕೆ ಮಾರಾಟ ಮಾಡಲು ಬೆಳೆಗಾರರು ಮುಂದಾಗುತ್ತಿದ್ದಾರೆ’ ಎಂದು ಲಿಂಗದಹಳ್ಳಿ ಗ್ರಾಮದ ಅಡಿಕೆ ಬೆಳೆಗಾರ ಚಂದ್ರಶೇಖರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.