ದಾವಣಗೆರೆ: ಜಿಲ್ಲೆಯಲ್ಲಿ 138 ಮಂದಿಗೆ ಕೊರೊನಾ ಇರುವುದು ಬುಧವಾರ ದೃಢ ಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 15 ಸಾವಿರ (15034) ದಾಟಿದೆ.
ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಬರುವ ಆರೋಗ್ಯ ಸಿಬ್ಬಂದಿ ಪ್ರತಿಭಟನೆ ಹಮ್ಮಿಕೊಂಡಿರುವುದರಿಂದ ಜಿಲ್ಲಾಡಳಿತದಿಂದ ನೀಡಲಾಗುವ ಕೊರೊನಾ ಸಂಬಂಧಿ ಬುಲ್ಲೆಟಿನ್ ಬಂದಿಲ್ಲ.
ಬುಧವಾರ ಎಷ್ಟು ಮಂದಿಗೆ ಕೊರೊನಾ ಬಂದಿದೆ ಎಂಬುದಷ್ಟೇ ಅಂಕಿ ಅಂಶವನ್ನು ರಾಜ್ಯಕ್ಕೆ ನೀಡಲಾಗಿದೆ. ಗುಣಮುಖರಾಗಿ ಬಿಡುಗಡೆಗೊಂಡವರು, ಮೃತಪಟ್ಟವರ ಪಟ್ಟಿಯನ್ನು ನೀಡದೇ ಇರುವುದರಿಂದ ಅವೆಲ್ಲವನ್ನು ರಾಜ್ಯ ಬುಲ್ಲೆಟಿನ್ನಲ್ಲಿ ತೋರಿಸಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
16 ಮಂದಿಗೆ ಕೊರೊನಾ ದೃಢ
ಮಲೇಬೆನ್ನೂರು: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳ 16 ಮಂದಿ ನಾಗರಿಕರಿಗೆ ಬುಧವಾರ ಕೊರೊನಾ ತಗುಲಿರುವುದು ಖಚಿತಪಟ್ಟಿದೆ.
ಪಟ್ಟಣದ ಇಬ್ಬರು ಪುರುಷರು, ಕೊಮಾರನಹಳ್ಳಿ ಇಬ್ಬರು ಪುರುಷರು, ಒಬ್ಬ ಮಹಿಳೆ, ಭಾನುವಳ್ಳಿ ಆರೋಗ್ಯ ಕೇಂದ್ರದ ವೈದ್ಯ ಸೇರಿದಂತೆ, ಜಿಗಳಿ, ಯಕ್ಕೆಗೊಂದಿ, ಕುಂಬಳೂರು, ಕುಣಿಬೆಳಕೆರೆ, ದೇವರಬೆಳಕೆರೆ, ನಂದಿಗುಡಿ, ಹಿಂಡಸಗಟ್ಟೆ ಗ್ರಾಮದ ತಲಾ ಒಬ್ಬ ಪುರುಷರು, ಹಿಂಡಸಗಟ್ಟೆಯ ಒಬ್ಬ ಮಹಿಳೆ, ಹೊಳೆಸಿರಿಗೆರೆ ಪುರುಷ ಹಾಗೂ ಮಹಿಳೆಗೆ ಕೊರೊನಾ ಸೋಂಕು ತಗುಲಿದೆ ಎಂದು ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಕ ಉಮಣ್ಣ ಮಾಹಿತಿ ನೀಡಿದರು.
ಸಮುದಾಯ ಆರೋಗ್ಯ ಕೇಂದ್ರದ ಕರ್ತವ್ಯ ವೈದ್ಯಾಧಿಕಾರಿ ಡಾ. ಲಕ್ಷ್ಮೀದೇವಿ, ಉಪ ತಹಶೀಲ್ದಾರ್ ಆರ್. ರವಿ. ಡಾ. ನಿಸಾರ್ ಅಹ್ಮದ್, ಕಾಜಲ್ ಇದ್ದರು. ಸಮೀಪದ ಗುಡ್ಡದಬೇವಿನಹಳ್ಳಿಯಲ್ಲಿ ಆರೋಗ್ಯ ಇಲಾಖೆ ಗಂಟಲು ದ್ರವ ಸಂಗ್ರಹಣೆ ಮಾಡಲು ಬಂದರೂ, ಗ್ರಾಮಸ್ಥರು ಬರಲಿಲ್ಲ.
7 ಮಂದಿಗೆ ಕೊರೊನಾ
ಸಾಸ್ವೆಹಳ್ಳಿ: ಹೋಬಳಿಯ ಮಾವಿನಕೋಟೆ ಮಹಿಳೆ,ಬೆನಕನಹಳ್ಳಿ ಇಬ್ಬರು ಪುರುಷರು, ಐನೂರು ಮಹಿಳೆ, ಹೊಸಹಳ್ಳಿ ಪುರುಷ ಮತ್ತು ಮಹಿಳೆ ಹಾಗೂ ಕುಳಗಟ್ಟೆ ಮಹಿಳೆ ಸೇರಿ 7 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಉಪತಹಶಿಲ್ದಾರ್ ಎಸ್.ಪರೆಮೇಶ್ ನಾಯ್ಕ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.