ದಾವಣಗೆರೆ: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಘೋಷಿಸಿರುವ ವಾರಾಂತ್ಯ ಕರ್ಫ್ಯೂ, ದಾವಣಗೆರೆಯಲ್ಲಿ ಪರಿಣಾಮಕಾರಿಯಾಗಿದ್ದು,ವಾಣಿಜ್ಯ ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಬೆಳಿಗ್ಗೆ 6 ಗಂಟೆಯಿಂದ 10ರವರೆಗೆ ವರೆಗೆ ಮೆಡಿಕಲ್ ಸ್ಟೋರ್ ಗಳು, ತರಕಾರಿ, ಹಾಲು, ದಿನಪತ್ರಿಕೆ, ದಿನಸಿ ಅಂಗಡಿ, ಬೇಕರಿ ಸೇರಿದಂತೆ ಅಗತ್ಯವಸ್ತುಗಳ ಮಾರಾಟ ಮಳಿಗೆಗಳು ತೆರೆದಿದ್ದವು. ಮುಂಜಾನೆಯೇ ಹೆಚ್ಚಿನ ಸಂಖ್ಯೆಯ ಗ್ರಾಹಕರು ಅಗತ್ಯ ವಸ್ತುಗಳನ್ನು ಖರೀದಿಸಿದರು. 10 ಗಂಟೆಯ ನಂತರ ಮೆಡಿಕಲ್ ಗಳನ್ನು ಬಿಟ್ಟು ಬಾಕಿ ಎಲ್ಲ ಅಂಗಡಿಗಳು ಮುಚ್ಚಿದವು.
ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ ಪೊಲೀಸರು ಸಂಚರಿಸಿ, ವ್ಯಾಪಾರಸ್ಥರನ್ನು ಹಾಗೂ ಗ್ರಾಹಕರನ್ನು ಮನೆಗೆ ತೆರಳುವಂತೆ ಸೂಚಿಸಿದರು.
ಬಸ್ ಗಳಿಗೆ ಪ್ರಯಾಣಿಕರಿಲ್ಲ: ಕರ್ಫ್ಯೂ ಜಾರಿಯಲ್ಲಿದ್ದರೂ, ಕೆಎಸ್ ಆರ್ ಟಿಸಿ ಬಸ್ ಗಳು ಸಂಚರಿಸುತ್ತಿವೆ. ಆದರೆ ಪ್ರಯಾಣಿಕರು ಇಲ್ಲ. ಗಂಟೆಗಟ್ಟಲೆ ಕಾದರೂ ಬೆರಳೆಣಿಕೆಯಷ್ಟು ಪ್ರಯಾಣಿಕರು ಬರುತ್ತಿಲ್ಲ. ಖಾಸಗಿ ಬಸ್ ಗಳು ಸಂಚರಿಸಲಿಲ್ಲ. ಇದರಿಂದಾಗಿ ಬಸ್ ನಿಲ್ಧಾಣ ಬಿಕೋ ಎನ್ನುತ್ತಿತ್ತು. ಅಂಗಡಿ ಬಂದ್ ಮಾಡಿಸಿದ ತಹಶೀಲ್ದಾರ್
ಅಂಗಡಿ ಮುಚ್ಚಿಸಿದ ತಹಶೀಲ್ದಾರ್:ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಕೆ.ಎಸ್ ಗಿರೀಶ್ ಅವರು ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಸಂಚರಿಸಿ ಅಂಗಡಿಗಳನ್ನು ಮುಚ್ಚಿಸಿದರು.
ವ್ಯಾಪಾರಕ್ಕೆ ಅವಕಾಶ ನೀಡುವಂತೆ ವರ್ತಕರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಸರ್ಕಾರದ ಅದೇಶ ಪಾಲನೆ ಮಾಡಿ ಎಂದು ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.